ರವೀಂದ್ರ ಕುಮಾರ್ ಅವರು ಬರೆದ ಕವಿತೆ ‘ಅಮರವಿದು ಒಲವು’

ವರುಷಗಳಿಂದ ದೂಳು ಬಿದ್ದಿದ್ದ
ಹೃದಯದ ಕೋಣೆಯನೊಮ್ಮೆ ತೆರೆದೆ
ಅಲ್ಲಿ ಕಂಡದ್ದು ನೋವಿನ ಅಲೆದಾಟ
ಅಸುನೀಗದೆ ನರಳುತಿಹ ವಿರಹದ ಚೀರಾಟ

ಅಲ್ಲೆಲ್ಲೋ ಮೂಲೆಯಲ್ಲಿ ಕೇಳಿಸಿತು
ಅಗಲಿದ ಪ್ರೇಮಿಯ ಹೆಸರಿನ ಕನವರಿಕೆ
ಸಂತೈಸುವರಿಲ್ಲದೆ ಜೀವ ಕೊರಗುತಿತ್ತು
ಆಡದೇ ಉಳಿದ ಮಾತು ಕೋಣೆಯ ಸುತ್ತ ಗುನುಗುತಿತ್ತು

ಸತ್ತಿಹ ಕನಸುಗಳ ಗೋರಿಗಳ‌ ಮೇಲೆ
ಹೊಸದೊಂದು ಬಯಕೆಯ ಚಿಗುರಿ ಕೇಳುತಿದೆ
ಎಂದಾದರೂ ಬರುವಳೇ ನನ್ನವಳು ಕಣ್ಮುಂದೆ
ಉತ್ತರಿಸಲಾಗದೆ ನಾ ಮೌನಿಯಾದೆ

ಮನ ಹೇಳಿತು ಮುರಿದ ಭಾವಗಳ ಎಸೆದು
ಎಣೆದ ನೋವಿನ ಬಲೆಗಳ ಬಿಡಿಸೆಂದು
ಮಡಿದ ಕನಸುಗಳನು ಗುಡಿಸೆಂದು
ಹೊಸ ಜೀವ ಜ್ಯೋತಿಯ ಬೆಳಗೆಂದು

ಸುಚಿಗೊಳಿಸಲು ಕೈಯಿಟ್ಟೆ ಎದೆಯೊಳಗೆ
ಮಲಗಿದ್ದ ಭಾವಗಳು ಸಿಡಿದೆದ್ದು ಗದರಿದವು
ಮುಟ್ಟದಿರೂ ಏನನ್ನು ಅದು ನನ್ನ ಉಸಿರೆಂದು
ನೆನಪಿಲ್ಲದೇ ಇರಲಾರೆ ಅದು ನನ್ನ ಬದುಕೆಂದು

ಕಣ್ಮುಚ್ಚಿ ಕರಗಿದೆನು ಈ ಪರಿಯ ಒಲವ ನೋಡುತ್ತ
ವಿರಹದಲಿ ಸೊರಗಿರುವ ಪ್ರೀತಿಗೆ ನಮಿಸುತ್ತ
ಬಾಗಿಲನು ಮುಚ್ಚಿದೆನು ಕೊನೆಯಾಸೆ ಫಲಿಸಲಿ ಎಂದು
ಅರಸುತ್ತ ಹಿಂದುರುಗಿದೆ ಅಮರವಿದು ಒಲವೆಂದು

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
    0
    Your Cart
    Your cart is emptyReturn to Shop