ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ:

ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ದೇಶದ 65% ಜನಸಂಖ್ಯೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ಅಂಕಿಅಂಶಗಳು ಗರ್ವ ತರುವಷ್ಟು ಶಕ್ತಿಯನ್ನೂ ಹೊಂದಿವೆ, ಜೊತೆಗೆ ಅದು ಹೊಣೆಯ ಬಗ್ಗೆಯೂ ಎಚ್ಚರಿಕೆಯನ್ನು ತರುವಂತೆಯೂ ಮಾಡುತ್ತವೆ.

ಯುವಶಕ್ತಿ ಎಂದರೇನು?

ಯುವಶಕ್ತಿ ಅಂದರೆ ಕೇವಲ ಶಾರೀರಿಕ ಶಕ್ತಿ ಅಥವಾ ಶಕ್ತಿಮೀಕ್ಷೆ ಅಲ್ಲ. ಇದು ಮನೋಬಲ, ಆತ್ಮಬಲ, ಮೌಲ್ಯಬದ್ಧತೆ, ಬದ್ಧತೆ ಮತ್ತು ಬದಲಾವಣೆ ತರಬಲ್ಲ ಸಾಮರ್ಥ್ಯದ ಸಮೂಹ ರೂಪ. ಇವರು ಮುಂದಿನ ರಾಜಕೀಯ ನಾಯಕರು, ಬೋಧಕರು, ವೈದ್ಯರು, ಕೃಷಿಕರು, ಉದ್ಯಮಿಗಳು ಮತ್ತು ಸೈನಿಕರು. ಇವರೆಲ್ಲರೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆಯ ಕ್ರಾಂತಿಗೆ ಕಾರಣರಾಗಬಹುದಾದ ಶಕ್ತಿಯ ಸಮುದಾಯ.

ಸ್ವಾಮಿ ವಿವೇಕಾನಂದರು ಹೇಳಿದಂತೆ:
“ಏಳಿರಿ, ಎದ್ದೇಳಿರಿ, ಗುರಿ ಮುಟ್ಟುವವರೆಗೆ ಮುನ್ನುಗ್ಗಿರಿ” ಎಂಬ ಮಾತು ಯುವಕರಲ್ಲಿ ಉರಿಯುವ ಅಗ್ನಿಯನ್ನು ಮತ್ತಷ್ಟು ಬೆಂಕಿಯಾಗಿಸುವ ಶಕ್ತಿಯನ್ನು ಹೊಂದಿದೆ. ಈ ಮಾತುಗಳು ಕೇವಲ ಸ್ಫೂರ್ತಿ ನೀಡುವ ಮಾತುಗಳಾಗಿಯೇ ಅಲ್ಲ; ಇದು ಜೀವನದ ಗುರಿಯೇ ಆಗಬೇಕು. ಸ್ವಾಮಿ ವಿವೇಕಾನಂದರು ಸಮಾಜದ ಬದಲಾವಣೆಗೆ ಬೇಕಾಗಿರುವ ಶಕ್ತಿಯ ಮೂಲ ಯುವಕರಲ್ಲಿದೆ ಎಂದು ನಂಬಿದ್ದ ಮಹಾನ್ ಚಿಂತಕರು. ಅವರು ಭಾರತವನ್ನು ಬದಲಾಯಿಸಬಲ್ಲ ಶಕ್ತಿ ಯುವಜನತೆಯಲ್ಲಿದೆ ಎಂದು ನಂಬಿದ್ದರು.

ಇಂದಿನ ಯುವಶಕ್ತಿ ಬದಲಾಗಬೇಕಾದ ಅಗತ್ಯವೇನು?

ಸಮಾನತೆ, ಜಾತಿ ನಿರಪೇಕ್ಷತೆ, ಪರಿಸರ ಪ್ರೇಮ, ಮಹಿಳಾ ಸಬಲೀಕರಣ, ಸಮಾಜದ ಬೆಂಬಲ, ಶಿಷ್ಟಾಚಾರ, ನೀತಿ, ಧರ್ಮಾತ್ಮತೆ ಇವೆಲ್ಲವೂ ಇಂದಿನ ಯುವಜನತೆಯಾಗಿ ನಾವು ಹೆಚ್ಚು ಗಮನಿಸಬೇಕಾದ ಅಂಶಗಳಾಗಿವೆ. ಇವೆಲ್ಲದರ ಮಧ್ಯೆ ಯುವಜನತೆಯ ಗಮನ ಸಾಮಾಜಿಕ ಮಾಧ್ಯಮಗಳಲ್ಲಿ, ಬಾಹ್ಯ ಆಕರ್ಷಣೆಗಳಲ್ಲಿ ಮತ್ತು ಶೂನ್ಯ ಗುರಿಗಳ ಮೋಜಿನಲ್ಲಿ ಬೀಳುತ್ತಿರುವುದು ನೋವಿನ ಸಂಗತಿ.

ಆಧುನಿಕತೆ ಎಂಥದ್ದಾದರೂ ಮೌಲ್ಯಗಳನ್ನು ಪೂರೈಸಿದಾಗ ಮಾತ್ರ ಅದು ಸಮಾಜದ ಬದಲಾವಣೆಗೆ ಸಹಕಾರಿ. ಇಲ್ಲದಿದ್ದರೆ ಅದು ದುರ್ಮಾರ್ಗದ ತಿರುಗುಬಾಣವಾಗಬಹುದು. ಈಗಾಗಲೇ ನಾವು ಹೆಚ್ಚುತ್ತಿರುವ ಡ್ರಗ್ಸ್ ಬಳಕೆ, ಅಪರಾಧ ಪ್ರವೃತ್ತಿ, ರಾಜಕೀಯ ಅಶಿಷ್ಟತೆ, ಸಾಮಾಜಿಕ ಮಾಧ್ಯಮ ದುರುಪಯೋಗ – ಇವೆಲ್ಲವನ್ನೂ ನೋಡಿ ಎಚ್ಚರಗೊಳ್ಳಬೇಕಿದೆ.

ಸಮಾಜದ ಪ್ರತಿಫಲ – ಯುವಶಕ್ತಿಯ ಧ್ಯೇಯವಾಗಲಿ:

ಹೆಚ್ಚಾಗಿ ಯುವಕರು ತಮ್ಮ ಬುದ್ಧಿಮತ್ತೆಯನ್ನು ಮಾತ್ರ ತೋರಿಸಲು ಪ್ರಯತ್ನಿಸುತ್ತಾರೆ. ಆದರೆ ಬುದ್ಧಿ ಮಾತ್ರವಲ್ಲ, ಕರ್ತವ್ಯಬುದ್ಧಿ ಹಾಗೂ ಜವಾಬ್ದಾರಿ ಎಂಬ ಎರಡು ಅಂಶಗಳೂ ಅವರು ಬೆಳೆಸಿಕೊಳ್ಳಬೇಕಾದ ಅಡಿಪಾಯ. ಸಮಾಜ ಬದಲಾಗಬೇಕು ಎಂದರೆ ನಾವು ಬದಲಾಗಬೇಕು. ಯುವ ಶಕ್ತಿಯು ಕಲಿಕೆ, ಕಾಳಜಿ, ಕ್ರಿಯಾಶೀಲತೆ, ಕನಸನ್ನು ಕ್ರಿಯಾರೂಪಕ್ಕೆ ತರುವ ಶಕ್ತಿ ಹೊಂದಿರುವಾಗ ಮಾತ್ರ ಅದು ಸಾರ್ಥಕ.

ಯುವಶಕ್ತಿಯ ಸ್ಫೂರ್ತಿದಾಯಕ ಮಾದರಿಗಳು:

ಅಪಜಯದಲ್ಲಿ ಕೂಡ ಮುನ್ನಡೆಯುವ ಯುವಶಕ್ತಿಯ ಉದಾಹರಣೆಗಳು ಹಲವಾರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಭಗತ್ ಸಿಂಗ್, ಸುಖದೇವ್, ಚಂದ್ರಶೇಖರ್ ಆಜಾದ್‌ರಂತವರು ತೀವ್ರ ಭಾವನೆ ಮತ್ತು ಧೈರ್ಯದ ಪ್ರತಿರೂಪ. ಇಂದಿನ ಕಾಲದಲ್ಲೂ ಇಂಜಿನಿಯರಿಂಗ್ ವಿದ್ಯೆ ಬಿಟ್ಟು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗಾಗಿ ಕೆಲಸಮಾಡುತ್ತಿರುವ ಐಎಎಸ್‌ ಅಧಿಕಾರಿಗಳು ಅಥವಾ ಕೃಷಿಯಲ್ಲಿ ಹೊಸ ಆಯಾಮ ತರುವ ಯುವ ಕೃಷಿಕರು, ಸಾಮಾಜಿಕ ಚಟುವಟಿಕೆಗೆ ಕೈಹಾಕುವ ಸ್ಟಾರ್ಟ್‌ಅಪ್ ಯುವಕರು – ಎಲ್ಲರೂ ನಮ್ಮೆದುರಿಗಿರುವ ಜೀವಂತ ಉದಾಹರಣೆಗಳು.

ಬದಲಾಗಬೇಕಾದ ಚಿಂತನೆಗಳು:

1. ನಾನು ಏನು ಪಡೆಯಬಹುದು? ಎಂಬ ಪ್ರಶ್ನೆಯ ಬದಲು – ನಾನು ಸಮಾಜಕ್ಕೆ ಏನು ಕೊಡುಗೆಯಾಗಿ ನೀಡಬಹುದು? ಎಂಬ ಚಿಂತನೆ ಬೆಳೆಯಬೇಕು.
2. ಎಲ್ಲವು ಹಾಗೆ ಇದೆ. ಇಲ್ಲಿ ಯಾವುದು ಬದಲಾಗುವುದಿಲ್ಲ! ಎನ್ನುವ ನಿರ್ಲಕ್ಷ್ಯದ ಬದಲು – ನಾನು ಬದಲಾಗಬೇಕು, ಬದಲಾವಣೆ ನಾನು ಆರಂಭಿಸಬೇಕು ಎಂಬ ಆತ್ಮವಿಶ್ವಾಸ ಬೆಳೆಸಬೇಕು.
3. ಅವರಿಂದ ಏನು ಆಗುತ್ತೆ? ಎಂಬ ಪ್ರಶ್ನೆಯ ಬದಲು – ನನ್ನಿಂದ ಏನು ಆಗುತ್ತೆ? ಎಂಬ ಪ್ರಶ್ನೆ ಕೇಳಿಕೊಳ್ಳಬೇಕು.

ಯುವಜನತೆಯ ಕರ್ತವ್ಯಗಳು:

1 ಶಿಕ್ಷಣದ ಮೂಲಕ ಜ್ಞಾನವೃದ್ಧಿ
2 ಅರ್ಥಪೂರ್ಣ ಉದ್ಯಮ/ವೃತ್ತಿ ಆಯ್ಕೆ
3 ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು
4 ಪರಿಸರ ಸಂರಕ್ಷಣೆಯ ಜವಾಬ್ದಾರಿ
5 ಮತದಾನದ ಮಹತ್ವ ತಿಳಿದು ಯೋಗ್ಯ ವ್ಯಕ್ತಿಗೆ ಮತ ಚಲಾಯಿಸುವುದು.
6 ಮಹಿಳಾ ಗೌರವ ಮತ್ತು ಸಮಾನತೆಗೆ ಬೆಂಬಲ

“ಕರ್ಮಣ್ಯೇವಾಧಿಕಾರಸ್ತೇ ಮಾ ಫಲೆಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೆ ಸಂಗೋಸ್ತ್ವಕರ್ಮಣಿ ||”

“ನಿನಗೆ ಕರ್ಮ ಮಾಡುವ ಹಕ್ಕಿದೆ, ಫಲದ ಮೇಲೆ ಹಕ್ಕಿಲ್ಲ. ಫಲದ ಬಗ್ಗೆ ಚಿಂತೆಮಾಡದೆ ನಿನ್ನ ಕರ್ತವ್ಯವನ್ನು ನಿರ್ವಹಿಸು”

“ಯುವಶಕ್ತಿಯು ದೇಶದ ಭವಿಷ್ಯವಲ್ಲ, ಪ್ರಸ್ತುತವೂ ಹೌದು.”

ಈ ನಾಡಿಗೆ ಸ್ವಾತಂತ್ರ್ಯ ತಂದಂತಹ ಯುವಜನತೆಗೆ ಈಗ ಬದಲಾಗುವ ಹೊಣೆ ಬರುವ ಸಮಯ ಬಂದಿದೆ. ಭವಿಷ್ಯದ ಆಶಾಭಾವನೆ. ಸಮಾಜದ ಹೊಸ ಬೀಜವನ್ನು ಬಿತ್ತುವ ಹೊಣೆಗಾರಿಕೆ ನಮ್ಮ ಯುವಜನತೆಯ ಮೇಲಿದೆ. ಬದುಕು ಸಾರ್ಥಕವಾಗಬೇಕಾದರೆ, ಬದಲಾವಣೆ ಪ್ರತಿಯೊಬ್ಬ ಯುವಕನಲ್ಲಿಯೇ ಆರಂಭವಾಗಬೇಕು. ಒಂದು ಮೊಟ್ಟೆ ಹೊರಗಿನಿಂದ ಮುರಿದರೆ ಅದು ಅಂತ್ಯ, ಆದರೆ ಒಳಗಿನಿಂದ ಮುರಿದರೆ ಅದು ಹೊಸ ಜೀವನ. ಸಮಾಜದ ಮೊಟ್ಟೆಯೂ ಯುವಶಕ್ತಿಯ ಒಳಗಿನ ಬದಲಾವಣೆಯಿಂದಲೇ ಮುರಿಯಬೇಕು. ಆಗ ಮಾತ್ರ ನಾವೂ, ನಮ್ಮ ನಾಡೂ ಬೆಳಗುತ್ತೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop