ಶಂಕರ್ ಸಿಹಿಮೊಗ್ಗೆ (Shankar Sihimogge)

ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಮುಖ್ಯ ಸಂಪಾದಕರಾದ ಶಂಕರ್ ಸಿಹಿಮೊಗ್ಗೆಯವರು ಹುಟ್ಟಿದ್ದು ಮಲೆನಾಡು ಶಿವಮೊಗ್ಗದಲ್ಲಿ. ತಂದೆ ಗೋವಿಂದರಾಜು, ತಾಯಿ ನಾಗಮ್ಮನವರು. ಬಾಳ ಗೆಳತಿ ಅನುಷಾ ಹೆಗ್ಡೆಯವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಜವಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ, ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್  ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಓದು, ಬರವಣಿಗೆ, ಚಾರಣ ಮತ್ತು ನಾಟಕ ಮುಂತಾದ ಸೃಜನಶೀಲ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದುವಾಗಲೇ ಡಿ.ವಿ.ಎಸ್. ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ರಂಗಭೂಮಿ ತರಬೇತಿಯನ್ನು ಪಡೆದುಕೊಂಡು ಈವರೆಗೆ ಸುಮಾರು ಹತ್ತಕ್ಕು ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಮ್ಯಾಕ್ ಬೆತ್, ಮಹಾಬಲಯ್ಯನ ಕೋಟು, ವಸುದೈವ ಕುಟುಂಬಕಂ, ಮತ್ತು ದಕ್ಷಯಜ್ಞ ಮುಖ್ಯವಾದವುಗಳು.

ಕೆಲಸದ ನಡುವೆಯೂ ಸಾಹಿತ್ಯ ರಂಗಭೂಮಿಯತ್ತ ಒಲವಿಟ್ಟುಕೊಂಡಿರುವ ಕಾರಣ ಇವರು ಬೆಂಗಳೂರಿನಲ್ಲಿ ಸ್ನೇಹಿತರೊಡಗೂಡಿ ‘ಚೈತ್ರಾಕ್ಷಿ ರಂಗಭೂಮಿ’ ಎಂಬ ರಂಗತಂಡವನ್ನು ಕಟ್ಟಿಕೊಂಡಿದ್ದಾರೆ. ಈ ರಂಗತಂಡದ ಮೂಲಕ ಇದುವರೆಗೂ ಜಲಗಾರ,  ಹೆಣದ ಬಟ್ಟೆ ಮತ್ತು ಅನಿಮಲ್ ಫಾರ್ಮ್ ಎಂಬ ಮೂರು ನಾಟಕಗಳನ್ನು ಪ್ರದರ್ಶಿಸಲಾಗಿದೆ.  ಕಾಲೇಜು ಓದುವ ದಿನಗಳಲ್ಲಿ  ಸಾಗರದ ಹೆಗ್ಗೋಡಿನ ‘ನೀನಾಸಂ ಶಿಬಿರ’ಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆ, ಶಿಬಿರಗಳಲ್ಲಿ ನಡೆಯುತ್ತಿದ್ದ ವಿಮರ್ಶೆ ಸಾಹಿತ್ಯ ಸಂವಾದದಂತಹ ಕಾರ್ಯಕ್ರಮಗಳು ನನ್ನ ಕಲಿಕೆಯಲ್ಲಿ ಹೆಚ್ಚು ಪ್ರಭಾವ ಬೀರಿವೆ ಎನ್ನುತ್ತಾರೆ.

ಇವರ ಮೊದಲ ಕವನ ಸಂಕಲನ ‘ಕುದುರೆಯ ವ್ಯಥೆ’ ೨೦೧೫ರಲ್ಲಿ ಪ್ರಕಟಣೆಗೊಂಡಿದೆ. ರಾಜಕಾರಣದ ಬಗ್ಗೆ ಸ್ಪಷ್ಟ ನಿಲುವುಗಳಿಟ್ಟುಕೊಂಡಿರುವ ಇವರು ಸಾಹಿತ್ಯ ನನ್ನ ನೆಚ್ಚಿನ ಹವ್ಯಾಸ ಎನ್ನುತ್ತಾರೆ, ಇದುವರೆಗೂ ಇವರ ಪದ್ಯ, ಕತೆ, ನಾಟಕ ವಿಮರ್ಶೆ ಮತ್ತು ಲೇಖನಗಳನ್ನು ವಿಜಯ ಕರ್ನಾಟಕ, ಪ್ರಜಾವಾಣಿ, ವಾರ್ತಾ ಭಾರತಿ, ಅವಧಿ, ಬುಕ್ ಬ್ರಹ್ಮ, ಶಿವಮೊಗ್ಗ ಟೈಮ್ಸ್, ಮಾಸ ಪತ್ರಿಕೆಗಳಾದ ಸುಧಾ, ನಿಮ್ಮೆಲ್ಲರ ಮಾನಸ ಮತ್ತು ಸಖಿ ಪ್ರಕಟಿಸಿವೆ. ‘ಬಾನ ಬಯಲ ಚುಕ್ಕಿಗಳು’, ‘ಕಾವ್ಯಯಾನ’, ‘ಕಿರಂ ಹೊಸ ಕವಿತೆ ಸಂಪುಟ ೧,೨,೩’, ‘ವಿಶ್ವಶಕ್ತಿ – ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ’, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿತ ‘ಕವಿತೆ-೨೦೨೧’ ಮತ್ತು ‘ಕವಿತೆ-೨೦೨೨’ ಸಂಪಾದಿತ ಕೃತಿಗಳಲ್ಲಿ ಇವರ ಕವಿತೆಗಳು ಪ್ರಕಟಣೆಗೊಂಡಿವೆ. ‘ಗಾಂಧಿಯಾನ ಟ್ರಸ್ಟ್ ಮತ್ತು ಭಾರತೀಯ ವಿದ್ಯಾಭವನ’  ಪ್ರಕಟಿಸಿದ ‘ಕಿರಿಯರು ಕಂಡ ಗಾಂಧಿ’ ಸಂಪಾದಿತ ಕೃತಿಯಲ್ಲಿ ಇವರ ‘ನಮ್ಮಳೊಗೊಬ್ಬ ಗಾಂಧಿ’ ಲೇಖನ ಪ್ರಕಟವಾಗಿದೆ. ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ಇವರ ‘ಹೊಳಲೂರಿನ ಹಾಸ್ಟೆಲ್ ಹುಡುಗರು’ ಕತೆಯು ಬೆಂಗಳೂರು ವಿಶ್ವವಿದ್ಯಾಲಯದ ಬಿ.ವಿ.ಎ. ಮತ್ತು ಬಿ.ಎಫ್.ಎ. ಪದವಿಗೆ ಕನ್ನಡ ಭಾಷೆಯ ಪಠ್ಯವಾಗಿದೆ.

ಮಿಂಚುಳ್ಳಿ ಪ್ರಕಾಶನ ಮತ್ತು ಮಿಂಚುಳ್ಳಿ ಕಾವ್ಯ ಬಳಗದ ಮೂಲಕ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕವಿಗೋಷ್ಠಿ ಮತ್ತು ಕಾವ್ಯ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಮಿಂಚುಳ್ಳಿ ಬಳಗದ ಮೂಲಕ ‘ಮಿಂಚುಳ್ಳಿ ಕವಿಗೋಷ್ಠಿ’, ‘ಪಳಗನ್ನಡ ಓದು’ ಮತ್ತು ನಿರಂತರ ಏಳುದಿನಗಳ ‘ಬರಗೂರು ಕಾವ್ಯ ಸಪ್ತಾಹ’ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಬಳಗದ ಮೂಲಕ ‘ಕಾಡುವ ಕಿರಂ ೨೦೨೦’ ಆನ್ಲೈನ್ ಕಾರ್ಯಕ್ರಮಕ್ಕೆ ತಾಂತ್ರಿಕ ಸಹಾಯ ನೀಡಿದ್ದಾರೆ.‌ ಹಿರಿಯ ಕವಿ ‘ಗೋಪಾಲ ಕೃಷ್ಣ ಅಡಿಗ’ರಿಗೆ ನೂರು ವಸಂತಗಳು ತುಂಬಿದ ಸಂದರ್ಭದಲ್ಲಿ ಗೆಳೆಯರು ಸೇರಿ “ನೂರು ಅಡಿ ನೂರು ಮಡಿ” ಎಂಬ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ ಏರ್ಪಡಿಸಿ ಒಂದೇ ಸಮಯದಲ್ಲಿ ನೂರು ಜನ ಯುವಕವಿಗಳು ಅಡಿಗರ ಕವಿತೆಗಳನ್ನು ವಾಚನ ಮಾಡಿ ಕಾವ್ಯ ನಮನ ಸಲ್ಲಿಸಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ವಲಯದೊಂದಿಗೆ ನಂಟು ಬೆಸೆಯುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. 

ಪ್ರಕಟಿತ ಪುಸ್ತಕಗಳು:

೧ ಕುದುರೆಯ ವ್ಯಥೆ (ಕವಿತೆಗಳು)
೨ ಇರುವೆ ಮತ್ತು ಗೋಡೆ (ಕವಿತೆಗಳು)
೩ ಬೆನ್ನೇರಿದ ಬಯಲು (ಕಥೆಗಳು)
೪ ಕಿರಂ ಹೊಸ ಕವಿತೆ ೨೦೨೩ (ಸಂಪಾದಿತ ಕವಿತೆಗಳು)
೫ LOVE IS A DIVINE FRAGRANCE
(Edition of contemporary English Poems)
(An Anthology of World Poetry: 25 Countries and 67 English Poets)

ಪ್ರಶಸ್ತಿ:

  1. ‘ಇರುವೆ ಮತ್ತು ಗೋಡೆ’ ಕೃತಿಯ ಹಸ್ತಪ್ರತಿಗೆ ೨೦೨೩ನೇ ಸಾಲಿನ ‘ಕಡೆಂಗೋಡ್ಲು ಕಾವ್ಯ ಪುರಸ್ಕಾರ’ ದೊರೆತಿದೆ.
  2. ಇವರ “ಕರಿಧೂಳು” ಕಥೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯವು ಕೊಡಮಾಡುವ ೨೦೨೩ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಂಚಿನ ಪದಕ ದೊರಕಿದೆ.   
1
    1
    Your Cart
    Remove
    Love is a Divine fragrance e-copy.
    1 X 75.00 = 75.00