ವಿಶ್ವ ಕವಿತೆಗಳ ದಿನಕ್ಕೆ ರವಿ ಪಾಟೀಲ್ ಅಥಣಿ ಅವರು ಬರೆದ ಕವಿತೆ ‘ಕವಿ ಮತ್ತು ಕವಿತೆ’

ಬರೆದುದೇ ಬರೆದುದು
ಬರೆಬರೆದು ಘನಗಾಂಭೀರ್ಯಕ್ಕಾಯ್ತು ಸುಸ್ತು
ಖಬರ್‌ದಾರ್
ನಿಂತುಕೊಳ್ಳಿ ಇನ್ನು ಸರದಿಸಾಲಿನಲ್ಲಿ ಮುಂದೆ
ಎದೆಸೆಟೆಸಿ ಹೀಗೆ ಓದಿಕೊಳ್ಳಲು
ಜ್ಞಾನಪೀಠಿಗಳನ್ನು

ಬರೆಬರೆದು ಕಿವಿ ಕಳೆದುಕೊಂಡನಲ್ಲ ಕವಿ
ಕಿವಿ
ಕವಿ

ಕವಿಗೆ ಕವಿತೆ
ಕವಿತೆಗೆ ಕವಿ ಭೆಟ್ಟಿಯಾಗಲೇ ಇಲ್ಲವಲ್ಲ
ಪ್ರಶಸ್ತಿ ಪಾರಿತೋಷಕ ಬಹುಮಾನಂಗಳು
ಇತ್ಯಾದಿ ಇತ್ಯಾದಿ

ರಾಜ್ಯ ಸಾಮ್ರಾಜ್ಯಂಗಳು ಅಚಲ ಅಂಬರಾದಿಗಳು
ಬೆಳಗು ಬೈಗು ಸೊಕ್ಕು ಸೊಡರು
ಮೋಹ ಮಾಯೆ ಮಂದಾರಗಳು
ಪಾತರಗಿತ್ತಿ ಪಕೋಡಾಗಳು
ಏನಿಲ್ಲ ಏನಿದೆ ಹೇಳಿ ಅವನ ಕವಿತೆಗಳೊಳಗೆ?

ಬರೆಬರೆದು ಸೋತನಲ್ಲ ಕವಿ
ಬರೆಬರೆದು ಗುಡ್ಡೆಹಾಕಿದನಲ್ಲ ಕವಿ
ತನ್ನ ಧಾವಂತಗಳಿಗೆ ಸೋತು
ತನಗೇ ಆತು-ಹೂತು
ದಾರ್ಷ್ಟ ದ್ರೋಹಂಗಳಾದಿ ದಾಟಿ
ಸರ್ಕಾರಗಳೆಷ್ಟೋ ಬಿದ್ದೆದ್ದವು
ಮೂಕವಿಸ್ಮಿತ ಮಾಯೆಯೊಂದು ಅಲೆಯುತ್ತದಲ್ಲ
ರಸ್ತೆಗೊಂಟ ಈತನೊಟ್ಟಿಗೆ ಹಗಲು ರಾತ್ರಿಯೆನ್ನದೇ
ಅಲೆಯುತ್ತಾನೆ ಇಂವ ಮುಪ್ಪಡರಿಕೊಂಡವನಂತೆ ಪತ್ರಿಕೆಗಳ ಕೈಲಿಡಿದು
ಪದ್ಯ ಬಂತೋ ಇಲ್ಲೋ ಎಂದು ಪತ್ರಿಕೆಗಳ ಮೂಸುತ್ತಾ
ಬರೆದಾಗಲೊಮ್ಮೊಮ್ಮೆ ಧನ್ಯೋಸ್ಮಿ
ಬರೆದಾಗಲೊಮ್ಮೊಮ್ಮೆ ಮರುಹುಟ್ಟು ಅವನಿಗೆ
ಬದುಕು ಚುಂಗಲ್ಲದೇ ಇನ್ನೇನು ಹೇಳಿ ಅವನಿಗೆ?

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
C mk.
24 March 2024 04:06

Super

0
    0
    Your Cart
    Your cart is emptyReturn to Shop