ಡಾ.ಸದಾಶಿವ ದೊಡಮನಿ ಅವರು ಬರೆದ ಕವಿತೆ ‘ಮಾಂಸದಂಗಡಿಯ ನವಿಲು ನೆನಪಿನಲ್ಲಿ’


ನೀವು ಹೊರಟು ನಿಂತಿದ್ದು;
ನಡು ಮಧ್ಯಾಹ್ನ, ಕಡು ಬಿಸಿಲಲ್ಲಿ
ಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿ
ಶತಮಾನದ ನೋವಿಗೆ ಮದ್ದು ಅರಿಯುವ ಗಳಿಗೆಯಲ್ಲಿ

ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿ
ಹಗಲು ಗಸ್ತು ತಿರುಗುವಾಗ ನೀವು ಹುಲಿ
ಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;
ಕೇಳುತ್ತಿದೆ
ಹಿಮದ ಹೆಜ್ಜೆಯೂ ತೋರುತ್ತಿಲ್ಲ
ಚಿತ್ರದ ಬೆನ್ನು ಕಾಣುತ್ತಿಲ್ಲ
ಮಾಂಸದಂಗಡಿಯ ನವಿಲು ಹುಡುಕುತ್ತಿದ್ದೇನೆ
ನೀವು ಎಲ್ಲಿ? ಮಂಗಮಾಯ!

ಕೆಂಪು ದೀಪದ ಕೆಳಗೆ
ನನ್ನಕ್ಕ,ತಂಗಿಯರು ಎದೆ ಸುಟ್ಟುಕೊಂಡು
ನಲುಗುವಾಗ ನೀವು ತಾಯಿ
ಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿ
ಹಗಲು ದೀವಟಿಗೆಯಾಗಿ ಉರಿದು,
ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿ
ನೀವು ಕಾಣದ ದಾರಿ ತುಳಿದಿರಿ

ಎದೆಯ ಚರುಮವ ಬಗೆದು
ಕಾವ್ಯ ದುಡಿಯ ಹೊಲೆದು
ಭೀಮ, ಚೋಮರ ಚರಿತೆ ಹೆಕ್ಕಿದಿರಿ
ಗಿಡಗಾಗಿ, ಹದ್ದಾಗಿ ಉಳ್ಳವರ ಸೋಗು, ಸೊಕ್ಕು ಉರಗದ ನೆತ್ತಿ ಕುಕ್ಕಿದಿರಿ
‘ಎದೆಯಾಗ ಕಾವ್ಯ ರತ್ನ’ರಾಗಿ ಜತನವಾಗಿ ಉಳಿದೀರಿ

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
ಅಶೋಕ್. ಎಂ.ಬಿ.(ನವೋದಯ)
29 June 2023 15:48

ಒಳ್ಳೆ ಕವಿತೆ ಸರ್,👍👌

0
    0
    Your Cart
    Your cart is emptyReturn to Shop