ದೀಪಕ್ ಬೀರ ಪಡುಬಿದ್ರಿ ಅವರು ಬರೆದ ಕವಿತೆ ‘ರಹದಾರಿ’

ಅಲ್ಲೊಂದು ಕಟ್ಟಡ
ಇಲ್ಲೊಂದು ಕಟ್ಟಡ
ನಡುವೆ ಒಂದು ದಾರಿ
ಅಂಚಿನಲ್ಲೊಂದು ಪುಸ್ತಕ ಭಂಡಾರ
ದೂರದಲ್ಲೊಂದು ಘೋರಿ

ದಾರಿ ಅಂತಿಂತದ್ದಲ್ಲ
ಸಹಸ್ರ ಸಹಸ್ರ ಮಂದಿಯ
ಬದುಕಿಗೆ ರಹದಾರಿ
ನಿತ್ಯ ಇಲ್ಲಿ ಪಯಣ
ತಪ್ಪಿದ್ದಲ್ಲ

ಜ್ಞಾನ ನೀಡುವ
ಪುಸ್ತಕ ಖಜಾನೆಯಲ್ಲಿತ್ತು
ತರಹೇವಾರಿ ಬರಹ ಭಂಡಾರ

ದೂರದ ಘೋರಿಯಲಿ
ಸಾಗುತ್ತಿತ್ತು ಆತ್ಮಗಳ
ನಿತ್ಯ ಅನುಸಂಧಾನ

ಆ ಕಟ್ಟಡದ ಒಂದು ಪಾಶ್ವ೯ದಲಿ
ಹೂವೊಂದು ಅರಳಿತು
ಈ ಕಟ್ಟಡದಲಿ ಕಂಡ ಬೆಳಕಿಗೆ
ಬಾಗಿ ಅದರ ಘಮ
ದಾರಿಯೆಡೆ ಸೂಸಿತ್ತು

ಜನಮನಗಳಿಗೆ ನಿತ್ಯ
ಕಣ್ಮನಗಳಿಗೆ ಸುಗ್ಗಿ
ಹೂವು ಬೆಳಕಿನ ಕಣ್ಣಾಮುಚ್ಚಾಲೆಯ
ಪ್ರಣಯ ಪರಿಚಯ

ಜ್ಞಾನ ಭಂಡಾರದಿ ಬರಹ ವಿಷಯದಿ
ಅಡಗಿದ ಪರಿಮಳ
ಘೋರಿಯಲಿ ಬದುಕಿನ ಅಂತಿಮತೆಗೆ
ಹಚ್ಚಿದ ಊದು ಬತ್ತಿಯ ಸುವಾಸನೆ

ದಿನ ದಿನವು ಸಾಗುತ್ತಿತ್ತು ಕಟ್ಟಡ,
ಪುಸ್ತಕ ಭಂಡಾರ, ದಾರಿ, ಗೋರಿಯ
ಕಾಯಕ

ಕಟ್ಟಡದಲಿ ಬಾಕಿಯಿದೆ ರಾಶಿ ರಾಶಿ ಕೆಲಸ ಕಾರ್ಯ
ದಾರಿಯಲಿ ಜನ ಜಾತ್ರೆ
ಪುಸ್ತಕದಂಗಡಿಯಲೂ
ಜನ ವಿರಳ
ಘೋರಿಯಲಿ ಕೆಲಸ
ಮುಗಿದವರ ಕೆಲಸ ಸಾಗುತ್ತಿತ್ತು

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
    0
    Your Cart
    Your cart is emptyReturn to Shop