ವಿಮರ್ಶೆಗಳು

ಮೀನು ಕುಡಿದ ಕಡಲು ‘ನಮ್ಮೊಳಗಿನ ಭೂತ-ವರ್ತಮಾನಗಳನ್ನು ತೆರೆದಿಡುವ ಕವಿತೆಗಳು’ – ಉದಂತ ಶಿವಕುಮಾರ್

ಪುಸ್ತಕ: ಮೀನು ಕುಡಿದ ಕಡಲು
ಕವಿ: ಸೂರ್ಯಕೀರ್ತಿ
ಪ್ರಕಾಶನ: ಅಲ್ಲಮ ಪ್ರಕಾಶನ
ಬೆಲೆ: 100 ರೂಪಾಯಿಗಳು
ಪುಸ್ತಕ ಬೇಕಾದವರು ವಾಟ್ಸಪ್ಪ್ ಮಾಡಿ: 9591367320

ಕವಿ ಸೂರ್ಯಕೀರ್ತಿ ಬರೆದಿರುವ, ಅಲ್ಲಮ ಕಾವ್ಯ ಪುರಸ್ಕಾರ ಪಡೆದ “ಮೀನು ಕುಡಿದ ಕಡಲು” ಕವನ ಸಂಕಲನವನ್ನು ಓದಿದೆ. ಈ ಸಂಕಲನದಲ್ಲಿ ಒಟ್ಟು 31 ಕವಿತೆಗಳಿವೆ. ಇಲ್ಲಿನ ಕವಿತೆಗಳನ್ನು ಓದುವ ಮೊದಲಿಗೆ ಅವರು ಬರೆದ “ಚೈತ್ರಾಕ್ಷಿ” ಕವಿತಾ ಸಂಕಲನವನ್ನು ಓದಿದ್ದೆ.

ಮೊದಲ ಕವಿತಾ ಸಂಕಲನಕ್ಕಿಂತ ಹೆಚ್ಚು ಮಾಗಿದ, ಬಾಗಿದ, ಧ್ಯಾನಿಸಿದ, ಅನುಭವಿಸಿದ ಕವಿತೆಗಳನ್ನು ಈ “ಮೀನು ಕುಡಿದ ಕಡಲು” ಸಂಕಲನದಲ್ಲಿ ಕಾಣಬಹುದಾಗಿದೆ. ಇಲ್ಲಿ ಸೂರ್ಯ ಕೀರ್ತಿಯವರು ಕವಿತೆಗೆ ಬೇಕಾದ ಅಂತಃಕರಣ, ಪದಲಾಲಿತ್ಯ, ಧ್ವನಿ ಶಕ್ತಿಗಳು ಸಹಜವಾಗಿ ಮೂಡಿರುವಂತೆ ನೋಡಿಕೊಂಡಿರುವುದು ಕವಿತೆಗಳ ಹದವನ್ನು ಹೆಚ್ಚಿಸಿವೆ.

‘ಗೌರಿ ಉತ್ತ ನೆಲ’ ಎನ್ನುವ ಕವಿತೆಯಲ್ಲಿ ಗೌರಿ ನಮ್ಮ ಹಳ್ಳಿಯ ಸಾಮಾನ್ಯ ಹೆಣ್ಣು ಮಕ್ಕಳಂತೆ ಗಂಡ ಮಕ್ಕಳೊಂದಿಗೆ ಸಾಂಸಾರಿಕ ಬದುಕಿನಲ್ಲಿ ಏಗುವುದನ್ನು ಚಿತ್ರಿಸುವ ಮೂಲಕ ಒಂದು ಹೊಸ ಬಗೆಯನ್ನು ನಮ್ಮಲ್ಲಿ ಮೂಡುವಂತೆ ಮಾಡಿರುವುದು ನಿಜಕ್ಕೂ ಸೋಜಿಗವೇ ಸರಿ. ‘ದ್ರೌಪದಿ ದಂಡೆ’ ಕವಿತೆಯ ಮೂಲಕ ದ್ರೌಪದಿಗಾದ ಅಪಮಾನಕ್ಕೆ ಕವಿ ಕಟ್ಟಿಕೊಡುವ “ಒಂಟಿ ರಾತ್ರಿಗಳಲ್ಲಿ ನಕ್ಷತ್ರಗಳ ಜೊತೆ ಅತ್ತಳಲ್ಲ, ಧರ್ಮದ ಧರ್ಮರಾಯನ ನ್ಯಾಯ ಎಲ್ಲಿ ಹೋಗಿ ಮಲಗಿತ್ತು? ಬಲ ಭೀಮನ ಆಜಾನುಬಾಹುಗಳು ಯಾವ ಮರಗಳ ಹತ್ತಿ ತಬ್ಬಿದವು? ಎನ್ನುವ ಈ ಸಾಲುಗಳು ನಿಜಕ್ಕೂ ದಿಟ್ಟತನವನ್ನು ತೋರಿಸುತ್ತವೆ.

ಸುನಂದ ಮತ್ತು ಅಮೃತಮತಿ ಕವಿತೆಯಲ್ಲಿ ತಮ್ಮದಲ್ಲದ ತಪ್ಪಿಗೆ ಪ್ರಶ್ನೆ ಮಾಡುವ ಮೂಲಕ ‘ಗಂಡು ಪ್ರೀತಿಸಿ ಸಾವಿರಾರು ರಾಣಿಯರ ಜೊತೆ ನಲಿಯುವಾಗ, ಹೆಣ್ಣು ಒಲ್ಲದ ಕೋಣಕ್ಕೆ ತಲೆಬಾಗಬೇಕೇನೇ? ಎಂದು ಹೆಣ್ಣಿಗೊಂದು ಗಂಡಿಗೊಂದು ನ್ಯಾಯವನ್ನು ಸೃಷ್ಟಿಸಿರುವ ಪುರುಷ ಪ್ರಧಾನ ಸಮಾಜಕ್ಕೆ ಚಾಟಿ ಏಟು ಕೊಟ್ಟಂತಿದೆ. ಪುರಾಣಗಳಲ್ಲಿನ ಈ ಕವಿತೆಗಳಿಗೆ ಕವಿ ಸೂರ್ಯ ಕೀರ್ತಿ ಹೊಸ ನೋಟಗಳನ್ನು ಕವಿತೆಗಳ ಮೂಲಕ ಓದುಗನ ಮುಂದಿಟ್ಟಿದ್ದಾರೆ.

ತಂದೆಗೆ ಮಗನೇ ಕನಸು, ನಿಜ. “ತನ್ನ ಕನಸಿನ ಕಾಮನಬಿಲ್ಲನ್ನು ಬಗ್ಗಿಸಿ ಜಗ್ಗಿಸಿ ಹೆಗಲ ಮೇಲೆ ಹೊತ್ತು ಜಾತ್ರೆಯ ತೋರಿಸಿದನಲ್ಲ! ಮತ್ತೇನು ಬೇಕು? ಈ ಸಾಲುಗಳನ್ನು ಓದುವಾಗ ಕಣ್ಣು ತೇವಗೊಳ್ಳುತ್ತವೆ. ‘ಬಣ್ಣದ ಗೊಂಬೆ’ ಕವಿತೆಯ ಮೂಲಕ ಭೂತಕಾಲದ ಅಪ್ಪನ ಬಡತನವನ್ನು ವರ್ತಮಾನ ಕಾಲದಲ್ಲಿ ಮಗನು ಅರ್ಥ ಮಾಡಿಕೊಳ್ಳುವ ರೀತಿಯನ್ನು ಬಹಳ ಚೆನ್ನಾಗಿ ಈ ಕವಿತೆಯಲ್ಲಿ ತೋರಿಸಿದ್ದಾರೆ. ಇಲ್ಲಿನ ಅನೇಕ ಕವಿತೆಗಳು ಹೊಸ ಲಯಗಳೊಂದಿಗೆ ಸೃಷ್ಟಿಗೊಂಡಂತಿರುವುದು ಕವಿತೆಯ ಸೊಬಗನ್ನು ಹೆಚ್ಚಿಸಿವೆ.

ಸಮಕಾಲೀನ ಸಂಕಷ್ಟಗಳ ಜೊತೆಗೆ ಕಾವ್ಯ ಅನುಸಂಧಾನವಾಗಿರುವುದರಿಂದ ಓದುಗನಿಗೆ ಕವಿತೆಗಳು ಹೆಚ್ಚು ಇಷ್ಟವಾಗುತ್ತವೆ. ಒಂದು ದೇಶದ ವಾಸ್ತವ ಸ್ಥಿತಿಯನ್ನು ಮುಲಾಜಿಲ್ಲದೆ ‘ಈ ರಾಜ ಗೊತ್ತಿರಬೇಕು ಅಲ್ಲವೇ?’ ಕವಿತೆಯಲ್ಲಿ “ಈ ದೇಶದ ರಾಜ ಚಿಟ್ಟೆ ಹಿಡಿಯುತ್ತಿದ್ದಾನೆ; ಅಲ್ಲಲ್ಲಿ ಸೈನಿಕರ ಅಡಗಿಸಿ ಚಿಟ್ಟೆಗಳಿಗೆ ಗುಂಡಿಕ್ಕಿ ಹೊಡೆಯುವಂತೆ ಆದೇಶಿಸಿದ್ದಾನೆ! ಈ ದೇಶದ ರಾಜ ಮಣ್ಣಿಗೆ ಅಂಟಿರುವ ಕಲ್ಲುಗಳನ್ನು ಆಯ್ದು ಗುಡಿಯ ಕಟ್ಟುತ್ತಿದ್ದಾನೆ; ಅಲ್ಲಲ್ಲಿ ಭಕ್ತರು ಸಾಲಾಗಿ ದೇವರಿಗೆ ಪ್ರಾಣವ ಅರ್ಪಿಸಲು ಹರಕೆಯ ಕುರಿಗಳಾಗಿದ್ದಾರೆ” ಹೀಗೆ ಕವಿ ಕಟ್ಟಿ ಕೊಟ್ಟಿರುವ ಸಾಲುಗಳು ನಿಜಕ್ಕೂ ವಾಸ್ತವ ಸಂಗತಿಯನ್ನು ನಮ್ಮ ಮುಂದೆ ತೆರೆದಿಟ್ಟಂತೆ ಇದೆ. ಇದನ್ನು ಓದುಗನು ಮನಗಾಣ ಬೇಕಾಗಿದೆ. ಕವಿ ಸೂರ್ಯಕೀರ್ತಿ ತಮ್ಮ ಕವನಗಳ ಮೂಲಕ ಕಾವ್ಯಾಸಕ್ತರಿಗೆ ಪರಿಣಾಮಕಾರಿಯಾಗಿ ಮನವರಿಕೆ ಮಾಡುವ ಮೂಲಕ ಎಚ್ಚರಿಕೆ ನೀಡುವುದನ್ನು ನಾವಿಲ್ಲಿ ಗಮನಿಸಬಹುದು.

‘ಕಾಮವೆಂಬ ಅಪರಾಧಿ’ ಕವಿತೆಯಲ್ಲಿ ಕವಿ ಕಾಮವೆಂಬದು ಹೆಬ್ಬಯಕೆ, ಜೀವಸೃಷ್ಟಿ, ವ್ಯಾಪಾರ, ದಿವ್ಯ ಔಷಧ, ಅಶ್ಲೀಲ, ವಿನಾಶದ ಖಾಯಿಲೆ, ನಿರಪರಾಧಿ, ಕಾಮವೆಂಬುದು ಸೃಷ್ಟಿ, ಸೃಷ್ಟಿವೆಂಬುದೇ ಕಾಮ! ಎನ್ನುವ ಕಾಮದ ಬಗೆಗಿನ ವಿಭಿನ್ನ ಆಲೋಚನೆಯನ್ನು ವ್ಯಕ್ತಪಡಿಸಿರುವ ಪರಿ ಮೆಚ್ಚಲೇಬೇಕಾಗುತ್ತದೆ.

ಇಲ್ಲಿನ ಕೆಲವು ಕವಿತೆಗಳಲ್ಲಿ ಸಾಂಪ್ರದಾಯಿಕ ಸಂಕೇತಗಳ ನಾಶಗೊಳಿಸುವುದನ್ನು ನಾವು ನೋಡಬಹುದು. ಕವಿ ‘ಇದ್ದನೊಬ್ಬ ಬುದ್ಧ’ ಕವಿತೆಯಲ್ಲಿ “ಆಸೆಯೇ ದುಃಖಕ್ಕೆ ಮೂಲವೆಂದವನಿಗೆ ಚಿನ್ನದ ವಿಗ್ರಹ ಮಾಡಿಸಿ ದೇವಾಲಯದಲ್ಲಿಟ್ಟಿದ್ದಾರೆ; ಪದ್ಮದಳವನ್ನು ಹಿಡಿದ ಸನ್ಯಾಸಿಗೆ ಕಂಚಿನ ಪ್ರತಿಮೆ ಪ್ರತಿಷ್ಠಾನವಾಗಿದೆ!. ಎನ್ನುವ ಸಾಲುಗಳ ಮೂಲಕ ವಾಸ್ತವ ನೆಲೆಗಟ್ಟಿನಲ್ಲಿ ಮನುಷ್ಯನ ಅಜ್ಞಾನವನ್ನು, ಜ್ಞಾನದ ಬೆಳಕಿನಲ್ಲಿ ತೋರಿಸಿಕೊಟ್ಟಿರುವುದು ಕೆಲವರ ಅರಿವಿಗೆ ಬರಬೇಕಾಗುತ್ತದೆ. ಕವಿ ಸೂರ್ಯಕೀರ್ತಿ ಅವರು ತಮ್ಮ ಕವಿತೆಗಳಲ್ಲಿ ಓದುಗನಿಗೆ ಅರಿವನ್ನುಂಟು ಮಾಡುವಂತೆ ಮಾಡುವ ಮಾಯಕತೆಯನ್ನು ತೋರಿದ್ದಾರೆ.

‘ಸಾಕಿಗೆ ಬರೆದ ಪ್ರೇಮ ಕವಿತೆಗಳು’ ಮತ್ತು ‘ವೈನ್ ಕವಿತೆಗಳಲ್ಲಿ’ ಪ್ರೀತಿ – ಪ್ರೇಮ ನಿವೇದನೆಗಳ ಬಗ್ಗೆ, ಅಲ್ಲಿನ ಮೋಹಕ ಚೆಲುವಿನ ಬಗ್ಗೆ ನಮ್ಮೊಳಗಿನ ಬಿಂಬಕ್ಕೆ ಪ್ರೇಮ- ಕಾವ್ಯಧಾರೆ ಹರಿಸಿರುವುದನ್ನು ಕಾಣಬಹುದು. ಗಾಂಧಿಯ ಕನ್ನಡಕವು ಕೂಡ ಪಾಚಿಗಟ್ಟಿದ ಕಣ್ಣುಗಳಲ್ಲಿ ಮರೆಯಾಗುವ, ಬಾಗಿಲ ಹಿಂದೆ ನಡುಗುವ ಚಂದ್ರಮತಿಯರ, ಮೂರ್ಖ ರಾಜನ ಸುತ್ತ ಕಾಗೆಗಳು ಪಲ್ಲಕ್ಕಿಯ ಮೆರವಣಿಗೆ ನಡೆಸುವ, ಸತ್ತ ಪಟೇಲನ ಚಿತೆಗೆ ಕೋಳಿ ಪಿಳ್ಳೆಯ ನೀವಿಸಿ ಎಸೆದವರ ದಣಿವು ಇಂಗದೆ ಇರುವ, ತೊಗರಿ ಹೊಲದಲ್ಲಿ ನಾಟಿರುವ ಮೂಳೆಗಳ, ಹಿಮಕಾಲದ ಹೂಗಳ ಮರೆತು, ದುರಂತಕಾಲದ ಹೂ ಬಿಡದ ಹಣ್ಣುಗಳ ಕೆದುಕಿ ಹುಳುಗಳ ಹುಡುಕಲು ಶುರು ಮಾಡಿದ ಅತೃಪ್ತ ವಿಮರ್ಶಕನ, ಸೀತೆ ಕಷ್ಟ ಕೊಟ್ಟ ಭಗವಂತ ನಮಗೆ ಎಂದೆಲ್ಲ ಕೊರಗುವ ರಾಮಪುರದ ಕೆಂಪಜ್ಜಿ ಮುಂತಾದವರ ಬಗ್ಗೆ “ಮೀನು ಕುಡಿದ ಕಡಲು” ಸಂಕಲನದ ಕವಿತೆಗಳ ಮೂಲಕ ಬೆರಗನ್ನು ಕವಿ ತೆರೆದಿಟ್ಟಿದ್ದಾರೆ. ನಮ್ಮೊಳಗಿನ ಭೂತ – ವರ್ತಮಾನಗಳನ್ನು ಇಲ್ಲಿನ ಕವಿತೆಗಳಲ್ಲಿ ನಾವು ಕಾಣಬಹುದಾಗಿದೆ. ಕವಿ ಸೂರ್ಯಕೀರ್ತಿ ಉತ್ತಮ ಕಾವ್ಯ ಬರೆಯುವ ಯುವ ಕವಿಯಾಗಿ ನನಗೆ ಕಂಡು ಬರುತ್ತಾರೆ. ಮುಂದೆ ಅವರಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿ ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ.

SHANKAR G

View Comments

  • ಬಹಳ ಸೊಗಸಾದ ವಿಮರ್ಶೆ. ಕವನ ಸಂಕಲನವನ್ನು ಇಡಿಯಾಗಿ ತೆರೆದಿಟ್ಟಿದೆ. ಕುತೂಹಲ ಹೆಚ್ಚಿಸುವ ಬರೆಹ.

Recent Posts

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago