ವಿಮರ್ಶೆಗಳು

‘ಗುಡಿಸಿಲೊಳಗೊಂದು ಬೆಳ್ಳಿಚುಕ್ಕಿ’ ಪುಸ್ತಕದ ಬಗ್ಗೆ ಲೇಖಕ ಉದಂತ ಶಿವಕುಮಾರ್ ಅವರು ಬರೆದ ವಿಮರ್ಶೆ

ಡಾ. ಶಿವರಾಜ್ ಬ್ಯಾಡರಹಳ್ಳಿ ರವರು ಬರೆದಿರುವ “ಗುಡಿಸಿಲೊಳಗೊಂದು ಬೆಳ್ಳಿಚುಕ್ಕಿ” ಕವನ ಸಂಕಲನದಲ್ಲಿ ಒಟ್ಟು 37 ಕವಿತೆಗಳಿವೆ. ಇದು ಇವರ ಮೊದಲ ಕವನ ಸಂಕಲನವಾಗಿದೆ. ಬದಲಾಗುತ್ತಿರುವ ಸಮಾಜದ ಕಾಲ ಗತಿಯನ್ನು ಎಚ್ಚರದಿಂದ ವೀಕ್ಷಿಸುವ ನೋವುಂಡ ಮನಸ್ಸು, ಒಂದು ವ್ಯವಸ್ಥೆಯ ಬಗ್ಗೆ ತುಡಿಯುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಜಾತಿ ಸಂಘರ್ಷ ಮತ್ತು ಭ್ರಷ್ಟಾಚಾರದ ವ್ಯವಸ್ಥೆಯನ್ನು ವಿರೋಧಿಸುವ ಇಲ್ಲಿನ ಅನೇಕ ಕವಿತೆಗಳು ನಮ್ಮೊಂದಿಗೆ ಮಾತನಾಡುತ್ತವೆ.

ಹುಲಿಯೂರುದುರ್ಗದ ಬ್ಯಾಡರಹಳ್ಳಿಯಲ್ಲಿ ಜನಿಸಿ ಬಾಲ್ಯವನ್ನು ಕಳೆದ ಡಾ. ಶಿವರಾಜ್ ಬ್ಯಾಡರಹಳ್ಳಿ ರವರು ನಗರ ಹಾಗೂ ಗ್ರಾಮೀಣ ಜೀವನದ ಸಂಘರ್ಷಗಳನ್ನು ಇಲ್ಲಿನ ಹಲವು ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅಂದಿನ ಮತ್ತು ಇಂದಿನ ಕಾಲಘಟ್ಟದಲ್ಲಿ ನಡೆದ ಕಗ್ಗೊಲೆಗಳು, ದೇವಸ್ಥಾನ ಪ್ರವೇಶ ನಿರಾಕರಣೆ, ಕಂಬಾಲಪಲ್ಲಿಯ ದುರಂತ, ಮಲ ಹೊರುವ ಹೀನ ಕೃತ್ಯ, ಅಂಗರಹಳ್ಳಿಯ ಜೀತದ ಪ್ರಕರಣಗಳು ಹಾಗು ಅಸ್ಪೃಶ್ಯತೆ ಇವೆಲ್ಲವುಗಳ ಘಟನೆಗಳು ಕವನಗಳ ರೂಪವಾಗಿ ಈ ಸಂಕಲನದಲ್ಲಿ ಮೂಡಿ ಬಂದಿವೆ.

ಜಾತಿ ದ್ವೇಷದ ದಳ್ಳುರಿಯ ಬೆಂಕಿಯಲ್ಲಿ ಬೆಂದು ಹೋದ ಜೀವಗಳಿಗೆ ಮುಕ್ತಿಯೂ ಸಿಗಲಿಲ್ಲ ಕೊನೆಗೆ ನ್ಯಾಯವೂ ಸಿಗಲಿಲ್ಲ ಎನ್ನುವುದು “ನಪುಂಸಕರು” ಕವಿತೆಯಲ್ಲಿ ತಿಳಿಸಿದರೆ, ನಗರೀಕರಣದ ನಾಜೂಕಿನಲ್ಲಿ ಪಳೆಯುಳಿಕೆಯು ಪವಿತ್ರವಾಗುತ್ತದೆ, ಮೌಢ್ಯಕೂಮೆರಗು ಬರುತ್ತದೆ ಎಂಬುದನ್ನು “ಮಹಾದೇವಮ್ಮ” ಕವಿತೆಯಲ್ಲಿ ತೋರಿದ್ದಾರೆ. ಬದುಕಿಗಾಗಿ ಹೋರಾಟಗಳಲ್ಲೂ ಕಣ್ಣ ಮುಚ್ಚಾಲೆ ಆಟ ಆಡುವ ಕತ್ತಲೆಯಲ್ಲಿನ ಸಂಚನ್ನು “ಮುಷ್ಕರ” ಕವಿತೆಯಲ್ಲಿ ಮತ್ತು ಊರ ಯುಗಾದಿಯ ಸಂಭ್ರಮದೊಳಗೂ ಬೇವು ಬೆಲ್ಲದಂತೆ, ನೋವು ನಲಿವುಗಳನ್ನು ತೆರೆದಿಡುವ “ಯುಗಾದಿ” ಕವಿತೆಯಲ್ಲಿ ಹಾಗೂ ಉದ್ಯೋಗವೆಂಬ ಬಿಕ್ಷಾಪಾತ್ರೆ ಹಿಡಿದು ಹೊರಟ ತಿರುಕ ಅನುಭವದ ಕೊರತೆಯೊಳಗೆ ನರಳುವ ವಿಚಾರವನ್ನು ” ಉದ್ಯೋಗವೆಂಬ ಬಿಕ್ಷಾಪಾತ್ರೆ” ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ನಮ್ಮವಳು ಎನಿಸಿಕೊಳ್ಳುವ ಕನಸಿನಲ್ಲಿ ತಂಗಿ ಹೊರಟಿದ್ದು ಬೆಳಕಿನೆಡೆಗೆ, ಬಾನು ಬೆಳಕಾಯಿತು ಆದರೆ ಬರೀ ಕತ್ತಲು ಎನ್ನುವ ವಿಚಾರವನ್ನು “ಬರೀ ಕತ್ತಲು” ಕವಿತೆಯಲ್ಲಿ, ಮನೆ ಕಟ್ಟಿದರೂ, ಮಹಲು ಕಟ್ಟಿದರೂ, ಮಂದಿರ ಕಟ್ಟಿದರೂ ಹೊರಗೆ ನಿಲ್ಲುವ ಪರಿಪಾಠ ನಿಲ್ಲಲೇ ಇಲ್ಲ. ಮನಸು ಮನಸುಗಳನ್ನು ಬೆಸೆಯಲಾಗಲೇ ಇಲ್ಲ ಎನ್ನುವುದನ್ನು “ಮನಸು” ಕವಿತೆಯಲ್ಲಿ ಮತ್ತು ಜಾತಿಯೆಂಬ ಮರದ ಕುತ್ತಿಗೆ ಸುತ್ತಿ ಹಿಚುಕ ಬಾರದೆ ಸುಂಟರಗಾಳಿ ಎನ್ನುವುದನ್ನು “ಸುಂಟರಗಾಳಿ” ಎನ್ನುವ ಕವಿತೆಯಲ್ಲಿ ಹಾಗೂ ಹಲವು ಜಾತಿ ಮತಗಳ ಹೆಸರಿನಲ್ಲಿ ತಲೆಯೆತ್ತಿರುವ ಸಂಘರ್ಷ ಸಮಿತಿಗಳು ಗಂಭೀರವಾದ ಕಾಳಜಿಗಳನ್ನು ಆಳದಲ್ಲಿ ಹೊಂದಿದ್ದರು ಸ್ವಹಿತಾಶಕ್ತಿಯ ಹೆಸರಿನಲ್ಲಿ ಚಿದ್ರಗೊಳ್ಳುತ್ತಿರುವುದನ್ನು “ಈಡುಗಾಯಿ” ಕವಿತೆಯ ಮೂಲಕ ಕವಿ ತನ್ನ ಪ್ರಾಮಾಣಿಕತೆಯನ್ನು ತೋರಿದ್ದಾರೆ.

ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ವೈಚಾರಿಕ ಸಂಘರ್ಷವನ್ನು ಹಿಡಿದಿಡುವಲ್ಲಿ “ಗುಡಿಸಿಲಿನೊಳಗೊಂದು ಬೆಳ್ಳಿಚುಕ್ಕಿ” ಕವನದಲ್ಲಿ ಕವಿ ಚಂದವಾದ ವಿವರಣೆಯನ್ನು ನೀಡಿದ್ದಾರೆ. ಬಡತನ ಮತ್ತು ಹಸಿವು ಬೇಡುವಂತೆ ಮಾಡುವುದು ಸಾಮಾನ್ಯವಾಗಿದೆ. ಸವರ್ಣಿಯರ ಮನೆಗಳಲ್ಲಿ, ಹಬ್ಬ ಹರಿ ದಿನಗಳಲ್ಲಿ, ಊಟ ಬೇಡುವ ಸಂದರ್ಭದಲ್ಲಿ ಮಂಕರಿ ಒಳಗಿನ ಪಾತ್ರೆ ಪಗಡೆಗಳು ಒಂದು ಪುಟ್ಟ ಅಂಗಡಿಯೆ ಸರಿ ಎನ್ನುವ ಸತ್ಯವನ್ನು ಕವಿ “ಪುಟ್ಟ ಅಂಗಡಿ” ಕವಿತೆಯಲ್ಲಿ ಸ್ವತಃ ಅನುಭವಿಸಿದ್ದಾರೆ. ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬೇಡಿ ಎಂದು ವೈಚಾರಿಕವಾಗಿ ಬದುಕಿ ತೋರಿಸಿದ ಎಚ್ ಎನ್ ನರಸಿಂಹಯ್ಯ ಅವರ ಅನುಪಸ್ಥಿತಿಯನ್ನು ನೆನೆಯುತ್ತಾ ಲಾಲ್ ಬಾಗ್ ನ “ಮುಂಜಾನೆ ಗೆಳೆಯ” ಎಂದು ಕವಿ ತನ್ನ ಕವಿತೆಯಲ್ಲಿ ವ್ಯಕ್ತಪಡಿಸಿದ್ದಾರೆ.

ವ್ಯವಸಾಯ ಮನೆ ಮಂದಿ ಎಲ್ಲ ಸಾಯ ಎಂದು ಹೇಳುವಂತೆ ಗೀಚಿದ ಭೂಮಿಗೆರೆ ನಿನ್ನದಾಗಲಿಲ್ಲವಲ್ಲ ಎಂದು ಕವಿ “ನೇಗಿಲ ಯೋಗಿ” ಕವಿತೆಯ ಮೂಲಕ ಮರುಕ ಪಡುವುದನ್ನು ನಾವು ಗಮನಿಸಬಹುದು. ದುಡಿಮೆ ಯಾರದೋ ಪ್ರತಿಫಲ ಇನ್ನಾರದೋ ಎನ್ನುವ ಜೀತ ಪದ್ಧತಿಯನ್ನು ನೆನಪಿಗೆ ತರುವ “ಕೆಬ್ಬೆನೆಲ” ಕವಿತೆ ಮನಮುಟ್ಟುತ್ತದೆ. ನೀರಿಗಾಗಿ ಕಾದು ನಿಲ್ಲುವ, ಕಾದು ಕಾದು ಕಡೆಗೆ ಜೀವಕ್ಕಾಗಿ ಜೀವ ಉಳಿಸಿಕೊಳ್ಳಲು ತಾವೇ ನೀರು ಸೇದಿ ಹೊಸ ಬದಲಾವಣೆಗೆ ನಾಂದಿಯಾಗುವ ಹೆಂಗಸರ ಹೋರಾಟ ನಿಜಕ್ಕೂ “ಕಪಲೇಬಾವಿ” ಕವಿತೆಯನ್ನು ಓದಿದಾಗ ಮೈನವಿರೇಳುತ್ತದೆ.

ಹೀಗೆ ಕವಿ ಡಾ. ಶಿವರಾಜ್ ಬ್ಯಾಡರಹಳ್ಳಿ ಅವರು ತಮ್ಮ ಕವಿತೆಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ಕನ್ನಡಿಯಂತೆ ತೋರಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಇದಲ್ಲದೆ ಮೂಕ, ಚಿತ್ರಾನ್ನ, ನನ್ನ ಕೇರಿ, ನೀಚ ಬುದ್ಧಿಯ ಬಿಡು ನಾಲಿಗೆ, ಮೊಗ್ಗು, ಹಸಿರು ಟವೆಲ್, ಎಂಥ ಚಂದದ ಹೆಸರು ಸುನಾಮಿ, ಮುಂತಾದ ಕವಿತೆಗಳ ಮೂಲಕ ಬದಲಾವಣೆಗೆ ತುಡಿಯುವ ಮನಸ್ಸನ್ನು ತೋರಿದ್ದಾರೆ. ಡಾ ಶಿವರಾಜ್ ಬ್ಯಾಡರಹಳ್ಳಿ ಅವರ ಕವಿತೆಗಳಲ್ಲಿ ವಿಷಾದವಿದೆ, ಸ್ಥಗಿತಗೊಂಡ ಸಮಾಜದಲ್ಲಿ ಬೆಳವಣಿಗೆಗಾಗಿ, ಬದಲಾವಣೆಗಾಗಿ ತಹತಹಿಸುವ ಪ್ರಾಮಾಣಿಕ ಮನಸ್ಸು ಕವಿಯದಾಗಿದೆ. ಡಾ. ಶಿವರಾಜ್ ಬ್ಯಾಡರಹಳ್ಳಿ ಅವರು ಈ ದಿಸೆಯಲ್ಲಿ ಮುಂದುವರೆಯಲಿ ಎಂದು ಹಾರೈಸೋಣ.

SHANKAR G

Recent Posts

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

55 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago