ಕವಿತೆಗಳು

ಚನ್ನಪ್ಪ ಅಂಗಡಿ ಅವರು ಬರೆದ ಕವಿತೆ ‘ಹಾದಿಗಂಜಿ’

ಇಡುವೆರಡು ಹೆಜ್ಜೆ ಬಗಲಲಗಲಿ ಹಾದಿಗೇಡಾಗುತಿದೆ ಬಾಳು ಹಾಡಹಗಲೆ
ಹಾದಿಕಾರನಿಗೆ ಬೀದಿಯಲಿ ಮೋಕ್ಷ ಕದಕಿಂಡಿಯಲಿ ತೂರುವುದು ರೂಕ್ಷ
ಹೆಜ್ಜೆಯೊಂದಿಗೆ ಹೆಜ್ಜೆ ಹಚ್ಚಿಕೊಂಡು ನಡೆಯುತ ಬರುತಿದೆ ಒಜ್ಜೆ ನಡಿಗೆ
ಎಡಹುವ ಕೆಡಹುವ ಅಡ್ಡಕಸಬಿ ಕೈಕಾಲುತಲೆಗಳ ಬಳುವಳಿ ಅಡಿಗಡಿಗೆ
ಕೊರೆದಿರಿಯುವ ಲೇಸರಿನ ಬಾಣ ಬಿರುಸುಗಳ ಆರುಪಾರು ಕರಾರು
ತರಲೆಗೊಂದು ಮಾತು ಹರಲೆಗೊಂದು ಕಥೆ ಸವರುನಾಲಿಗೆ ನಿಸೂರು
ಒಣಗುದುಟಿ ಪಿಟಿಪಿಟಿ, ಮುಳ್ಳು ನಾಲಿಗೆ ಹಲ್ಲುದಾಟಿ ಎದುರಿಗಿವಿ ಹಸಿಹಸಿ
ಚಪ್ಪರಿಸಿ ಕುಪ್ಪಳಿಸಿ ಕೆನೆದಾಡುತ ನೆಗೆದು ಗುಲ್ಲೆದ್ದ ಗುಮಾನಿಯ ಕಸಿವಿಸಿ
ಇಬ್ಬದಿಯಲಿ ಒತ್ತಿಕೊಂಡು ಬರುವ ಭಿತ್ತಿಗಳಿರುವಾಗ ಸಾಗುವ ಬಗೆ ಹೇಗೆ?
ಅನಾದಿಕಾಲದ ಬುನಾದಿಯಲಿ ಇಲಿ ಹೆಗ್ಗಣಗಳ ಕಳ್ಳಾಟಗಳು ಬಗೆಬಗೆ
ಅದರುವ ಮೆಟ್ಟಿಲುಗಳು ಗದರುವ ಕಟ್ಟೆಗಳು ರಚ್ಚೆ ಹಿಡಿದ ಗಟಾರುಗಳು
ಉಬ್ಬಸ ತಾಳದೆ ಎದ್ದು ಕೂರುವ ಮತ್ತೆ ಬಿದ್ದು ಗೂರುವ ಹಾಸುಗಲ್ಲು
ಸರಬರ ಸರಿದು ಜೋಡಣೆಯಾಗುವ ಸಜಾತಿ ಮಚ್ಚಿ ಮೆಟ್ಟು ಕೆರಗಳು
ಕೈಯನು ಹಿಡಿದು ಸುತ್ತಲು ಸುತ್ತಿ ಕುಣಿದು ಹೆಣೆದ ಸರಪಳಿಯ ಮಧ್ಯೆದಿ
ಹೊಕ್ಕು ಸಿಕ್ಕು ಹೊರಬರುವ ದಾರಿಗಾಣದೆ ನೆರೆಮನೆಯಾದ ಚಕ್ರವ್ಯೂಹ
ಕಣ್ಣುಮುಚ್ಚಿದ ಕಿಡಕಿ, ಮಣ್ಣೇರಿರುವ ಪಡಕು ಬಡಿದುಕೊಂಡ ಹೆಬ್ಬಾಗಿಲು
ಹಾರುಹೊಡೆದ ಹಿತ್ತಲಬಾಗಿಲು ಆಯಾರಾಂ ಗಯಾರಾಂ ಗುಪ್ತ ಬಾಗಿಲು
ಬೇಟೆ ನುಂಗಿ ಹೊಡಮರಳಿ ಬಿದ್ದ ಊರ ನಡುದಾರಿಯ ಬೆನ್ನಗುಂಟ
ಸುರಿದ ಕಳ್ಳಡಾಂಬರು ರಣಬಿಸಿಲಲಿ ಹೆಣ ಮಿಡಿದಂತೆ ಸುಡುಸುಡುತ
ಪುಟುಪುಟು ಗುಳ್ಳೆಯದ್ದು ಅದುರುವ ಅಂಗಾಲನು ಬಾಚಿ ತಬ್ಬಿಕೊಂಡು
ಮುಂದೊಂದಡಿ ಜರುಗಿದರೆ ಹಿಂದೆರಡಡಿ ಜಾರುವುದು ಈ ಪಯಣ
ತಥಾಕಥಿತ ಪಥಿಕನ ದಾರಿಸಾಗುವ ಪರಿಯೊಂದು ನಿಜರಾಮಾಯಣ
ಅಂಗಳದ ರಂಗೋಲಿ ಅಂಗೈಯಲಿ ಕುಸಿದು ಬೆವರಮಳೆಗೆ ತೊಯ್ದು
ಚದುರಿದ ಕಣಗಳು ಚರಂಡಿ ನೀರಿನೊಂದಿಗೆ ಸೇರು ಸವ್ವಾಸೇರು
ಹದ್ದು ಮೀರಿ ಸದ್ದು ಮಾಡಿ ಪುಟಿದೆದ್ದು ಮೇಲೆ ಬಂದಿದೆ ಕರಿನೀರು
ಕಿಡಿ ಹಾರಿ ಕತ್ತಿಕೊಂಡ ಬೆಂಕಿ ನಾಲಿಗೆ ಮೇಲೆ ಅರೆಬೆಂದ ಕಾಕುಳ್ಳು
ಉಂಡಿದ್ದು ಉಟ್ಟದ್ದು ಕಂಡಿದ್ದು ಕೊಟ್ಟದ್ದು ಬಾಯ್ಬಿಟ್ಟರೆ ಬರಿಮಳ್ಳು
ಹಿಡಿದ ಮಾತ್ರಕೆ ಅಸ್ತ್ರ ಆಡಿದ್ದೆಲ್ಲ ಆಗದು ಶಾಸ್ತ್ರ ವರ್ತಮಾನದ ಸತ್ಯ
ಸೂರ್ಯನ ಕಣ್ಸನ್ನೆಗೆ ಬೀದಿಗೆ ಬೀಳಬೇಕು ಮೈಕೈ ಕೊಡವಿ ನಿತ್ಯ

ನಿಬ್ಬರವಾಗುವ ಹೊಟ್ಟೆಯಲಿ ಹಸಿವು ಹರಿದಾಡಿ ನಿಬ್ಬೆರಗಾಗುವ ಕಸುವು
ಬಿರಿಯುತಿರುವ ಕರುಳಗೋಡೆ ಸಿಕ್ಕಿದ್ದೆಲ್ಲವ ನುಂಗಲು ಊಳಿಡುತಿದೆ
ಕತ್ತಲಕೋಣೆಯ ದೀಪ ಚಿಟಿಲ್ ಚಿಟಿಲ್ ಮಕ್ಕೆದ್ದು ಕೆಂಡವುಗುಳುತಿದೆ
ಕಮಟು ವಾಸನೆ ಜಿದ್ದಿಗೆ ಬಿದ್ದು ಹಗೆಹೊಗೆಯಾಗಿ ಪ್ರಾಣವಾಯು ಹನನ
ಶುರುವಿಟ್ಟುಕೊಂಡಿತು ಇನ್ನಿಲ್ಲದ ಗುಣಗಾನ ತಾಳ ತಪ್ಪಲೆ ಗುನುಗುನುಗಾನ
ಲಯದ ಬದ್ಧತೆಗೆ ದನಿಗೂಡಿ ಹಾಡಾಗಿ, ಗೂಡುಕಟ್ಟಿದ ಹಾಡಿನ ಪಾಡಾಗಿ
ಉಸಿರ ಕೊಸರಾಟದ ಸದ್ದು ಗೋಡೆಗೆ ಮಾರ್ದನಿಸಿ ಸುದ್ದಿ ಸರ‍್ಯಾಗಿ
ಹಚ್ಚಿಕೊಂಡವರು ಬಿಚ್ಚು ಮನದಲಿ ಧಾವಿಸಿ ರಕ್ತಕಂಟಿಕೊಂಡ ಹಿಂಡು
ಹೊರಹೋಗುವ, ಒಳಬರುವ ತಳ್ಳಾಟದಲಿ ಎಂಜಲಾಗುತ ನಂಜಾಗಲು
ಬಿಚ್ಚುಗತ್ತಿ ಹಿರಿದು ಕಟಬುತ್ತಿಯ ಧ್ವಂಸ ಮಾಡುತಲೆ ಸಂಜೆಯಾಗಲು
ಬುತರೊಟ್ಟಿ ಹೊತ್ತು ತಂದ ಹೆಗಲು ಭಾರ ಇಳಿಸುತಲೆ ನೆರೆದ ತಲೆ
ಕರಗುವ ರೊಟ್ಟಿಗಂಟಿನ ಹೊಟ್ಟೆ ಆಸೆ-ನಿರಾಸೆಯ ಲೊಳಲೊಟ್ಟೆ
ಬಯಕೆ ತೀರಿಸಲು ಕಡೆಯ ಮಿತಿ ತೋರಬೇಕು ಕಾಳಜಿ ಕಕ್ಕುಲಾತಿ
ಒಣಗುವ ರಕ್ತಮಾಂಸ ರಿಕ್ತವಾಗುತ ಮೊಲೆವಾಲ ಎಳೆಬಾಯಾಗಿ
ಸುಕ್ಕುಗಟ್ಟಿದ ತೊಗಲ ಮಡಿಕೆ ಸುಟ್ಟು ಕಪ್ಪಿಟ್ಟ ಬಣ್ಣ ಕಳೆಕಳೆಯಾಗಿ
ತೊಳೆದ ಹೊಳಪಲಿ ಕಣ್ಣೆಂಜಲು ಕಾಡಿಗೆ ಬಾಯಂಜಲು ತೀರ್ಥವಾಗಿ
ನೆನಪ ಬುತ್ತಿಯ ಕಟ್ಟಲು ಬಿಳಿಯರಿವೆ ಹಾಸಿ ಕೈಯಿ ಮೊದಲಾಗಿ
ತುತ್ತು ರೊಟ್ಟಿಯ ನಂಬಿ ಗಟ್ಟಿಗೊಳಿಸಿದ ರಟ್ಟೆ ಹೊತ್ತ ಹೆಣ ಲೆಕ್ಕ
ಮರೆದ ಚಲನೆಯ ಮೆಲುಕು ನೆರೆದಾಕೃತಿಗಳು ಕಲಕು-ಮಲಕು
ಅದರುವ ನೆದರನು ಕೆತ್ತಿ ಚೂಪು ಮಾಡುತಲೆ ಕದಲುವ ನೆಲ
ತಿರುಗುವ ಬುಗುರಿ ನಿಲುಗಡೆಗೆ ನೆಲವನು ಕೊರೆದು ಕುಸಿದು
ಮತ್ತೆಮತ್ತೆ ವಾಲುತ ಲಯ ತಪ್ಪಿ ಸೋತು ಸೊರಗಿ ನೆಲಕಟ್ಟಿ
ಗುಮ್ಮಸು ಹಿಡಿದ ಹಾಸಿಗೆಯಲಿ ಜೀವ ಉಣ್ಣುವ ಜಂತುಗಳು
ಮರಗಟ್ಟಿದ ನಾಲಿಗೆ ಬಿರಿವ ತುಟಿಗಳನು ಸವರಲು ಹವಣಿಸಿ
ಕಚ್ಚಿ ಹಿಡಿದೇನೆಂದರೆ ಹಲ್ಲಿಲ್ಲ, ಇನ್ನಿದ್ದು ಏಗುವ ರಿಣ ಇಲ್ಲಿಲ್ಲ
ಬರಹೋಗುವ ಬಗೆ ಹೀಗೆ ಬರಿಗೈ ಬರಿಮೈ ಸುಟ್ಟಸುಣ್ಣದ ಹರಳು ನೀರಿಗಂಜಿ
ಕೊಟ್ಟು ತೀರದ ಲೋಭ ಬಿಟ್ಟು ಹೋಗದ ಮೋಹ ಕಟಬಾಯಲಿ ಹಾದಿಗಂಜಿ

SHANKAR G

View Comments

  • ತುಂಬಾ ಸೊಗಸಾದ ಕವಿತೆಗಳು

Share
Published by
SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago