ಕತೆಗಳು

ಅಮ್ಮು ರತನ್ ಶೆಟ್ಟಿ ಅವರು ಬರೆದ ಕತೆ ‘ಸೋತು ಗೆದ್ದವನು’

“ಮಿ.ರಾಕೇಶ್ ನೀವು ಒಳಗೆ ಹೋಗಬಹುದು” ಸ್ವಾಗತಕಾರಿಣಿ ಹೇಳಿದಾಗ , ಭಯ ಮಿಶ್ರಿತ ಧನಿಯಲ್ಲೇ
‘ಓಕೆ’ ಸೀದಾ ಕ್ಯಾಬಿನ್ ನತ್ತ ನಡೆದ.

ಸುತ್ತಲೂ ಗಾಜಿನ ಪರದೆಯಿಂದ ರಚಿಸಲ್ಪಟ್ಟ ಆ ಸುಂದರ ಕ್ಯಾಬಿನೊಳಗೆ ಇಬ್ಬರೂ ಟೈ , ಬ್ಲೇಜರ್ ಧರಿಸಿದ ವ್ಯಕ್ತಿಗಳು, ಮತ್ತೊಬ್ಬಳು ಗುಲಾಬಿ ಬಣ್ಣದ ಶರ್ಟ್ ಮೇಲೊಂದು ಕಪ್ಪು ಬಣ್ಣದ ಕೋಟು ಧರಿಸಿದ್ದ ಸುಂದರಿ ಕುಳಿತಿದ್ದು‌ ಗಾಜಿನಿಂದಲೇ ಕಾಣಿಸುತ್ತಿತ್ತು . ಜೀವನದುದ್ದಕ್ಕೂ ಹತಾಶೆಗಳನ್ನೇ ಅನುಭವಿಸಿದ ರಾಕೇಶಗೆ ಇಲ್ಲಿಯೂ ಕೆಲಸ ಸಿಗಬಹುದೆಂಬ ನಂಬಿಕೆ ಇರಲಿಲ್ಲ . ಆದರೆ ಒಂದು ಪ್ರಯತ್ನವಷ್ಟೆ , ಅವರ ಅನುಮತಿ ಕೇಳಿ ಒಳಗೆ ಕಾಲಿಟ್ಟ ,
‘ಕುಳಿತುಕೊಳ್ಳಿ “ಎಂದಾಗ ಫೈಲ್ ಅವರ ಕೈಗಿಟ್ಟು ಕುಳಿತನು.

‘ನಿಮ್ಮ ಪರಿಚಯ ಸಂಕ್ಷಿಪ್ತವಾಗಿ ಹೇಳಿ” ಆ ಯುವತಿ ಇಂಗ್ಲೀಷ್ ನಲ್ಲಿ ಕೇಳಿದಳು .
ಅವನ ಪರಿಚಯ ಮತ್ತು ಕೆಲಸದ ಅನುಭವ ಇಂಗ್ಲೀಷಿನಲ್ಲಿ ಹೇಳಿದನು. ಅವನ ಸರಾಗವಾದ ಮಾತಿನ ಶೈಲಿ , ಅನುಭವ , ಸಂವಹನ ಅವಳಿಗೆ ಇಷ್ಟವಾದಂತಿತ್ತು . ಕೆಲವು ಪ್ರಶ್ನೆ ಕೇಳಿ ,

“ವಾವ್ ಇವರ ಅನುಭವ ಮತ್ತೆ ನಾಲೆಡ್ಜ್ ನಮಗೆ ಸರಿಹೊಂದುವಂತಿದೆ ” ಪಕ್ಕದಲ್ಲಿ ಕುಳಿತವರಿಗೆ ಮೆಲ್ಲನೆ ಹೇಳಿದಳು . ಅವರಿಗೂ ಅದು ಸರಿಯೆನಿಸಿರಬೇಕು
“ಹೇಳಿ ನೀವೆಷ್ಟು ಸಂಬಳ ನಿರೀಕ್ಷೆ ಮಾಡ್ತಿರಾ ?”ಅದರಲ್ಲೊಬ್ಬ ಕೇಳಿದ
“25 ಸಾವಿರ ಸರ್”
” ಏನು.. ” ಅವರಿಗೆ ಆಶ್ಚರ್ಯವಾಗಿ ಕಂಡಿತು , ಇಷ್ಟು ಅನುಭವ ಇದೆ , ಜೊತೆಗೆ ಬುದ್ದಿವಂತ ಕೂಡ,‌ಬರಿಯ 25 ಸಾವಿರ ನಾ ಅನ್ನೋದು ಅದಕ್ಕೆ ಕಾರಣ.
“ಹೌದು ಸರ್ , ಆಗಲೇ 2 ವರ್ಷ ಆಯ್ತು ನಾನು ಕೆಲಸ ಮಾಡದೆ , ನನ್ನಲ್ಲೂ ಕೆಲವು ದೋಷಗಳಿರಬಹುದು, ಅದನ್ನು ಸರಿ ಪಡೆಸಿಕೊಳ್ಳಲು ನನಗೂ ಸ್ವಲ್ಪ ಸಮಯ ಬೇಕಾಗಬಹುದು” ಅವನ ನೇರ ಮಾತು , ಮತ್ತೆ ನಿಷ್ಠೆ ಅವರಿಗೆ ಇಷ್ಟವಾಯಿತು .

“ನೀವು ಆಯ್ಕೆಯಾಗಿದ್ದೀರಾ , ನಿಮ್ಮ ನೇಮಕಾತಿ ಪತ್ರ ಮೇಲ್ ಮಾಡ್ತೀವಿ , ಅದರಲ್ಲಿ ಸೇರುವ ದಿನಾಂಕ ಕೂಡ ಹಾಕಿರ್ತೀವಿ‌ , ಧನ್ಯವಾದಗಳು’ ಹೇಳಿ ಅವನನ್ನು ಬೀಳ್ಕೊಟ್ಟರು . ಕೆಲಸ ಕನ್ಫರ್ಮ್ ಆದ ಕುಶಿ ರಾಕೇಶ್ ನ ಮುಖದಲ್ಲಿ ಎದ್ದು ಕಾಣುತ್ತಿತ್ತು

*******************
ಅಂಕಿತಾ ಟ್ರಾವೆಲ್ಸ್ ಉದ್ಯಮಿ ಜಯಂತ್ ಕುಮಾರ್ ರವರ ಒಬ್ಬಳೇ ಮಗಳು . ಅತಿಯಾದ ಮುದ್ದು , ಜಗತ್ತಿನ ಎಲ್ಲಾ ಪ್ರೀತಿ ಅವಳಿಗೆ ವರಪಾಲಿಸಿದ್ದಂತೆ ಸುಖವಾಗಿ ಬೆಳೆದವಳು .ಚಿಕ್ಕವಳಿದ್ದಾಗ ಕರಾಟೆಯಲ್ಲಿ ಪದಕ ಗಳಿಸಿದಳು. ಅದೇ ಕಾರಣಕ್ಕೆ ಸಂಧ್ಯಾ ಶಾಲೆಯಲ್ಲಿ ಕ್ರೀಡಾ ಪ್ರತಿಭಾನ್ವಿತರಿಗೆ ನೀಡುವ ಉತ್ತಮ ಶಿಕ್ಷಣದಲ್ಲಿ ಅಂಕಿತಾಳಿಗೂ ಸೀಟು ಕೊಡಲಾಗಿತ್ತು . ಅವಳೇನು ಓದುಗರಲ್ಲಿಯೂ ಹಿಂದಿರದೇ , ಎಲ್ಲಾ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿ ಸಾಗಿ sslcನಲ್ಲಿ ಶಾಲೆಗೆ ೨ ನೇ ಟಾಪರ್ ಆಗಿ ಗುರುತಿಸಿಕೊಂಡಳು. .ಆದರೆ , puc ನಂತರ ಶ್ಯಾಮಲಾರಿಗೆ ಮಗಳನ್ನು ದೂರ ಕಳಿಸಲು ಮನಸಿರಲಿಲ್ಲ , ಕಾಡಿ ಬೇಡಿ ಮಗಳನ್ನು ಜೊತೆಗೆ ಇರಿಸಿಕೊಂಡರು . ಹಾಗಾಗಿ ಹತ್ತಿರದ ಕಾಲೇಜಿನಲ್ಲಿ ಮುಂದಿನ ಶಿಕ್ಷಣ ಪಡೆದಳು. ಶಿಕ್ಷಣದ ನಂತರ ಖಾಸಗಿ ಬ್ಯಾಂಕ್‌ ನಲ್ಲಿ ಉದ್ಯೋಗ ಪಡೆದು ಹೆತ್ತವರ ಜೊತೆಗೆ ಇದ್ದಳು . ಮದುವೆ ವಯಸ್ಸಿಗೆ ಬಂದ ಮಗಳನ್ನು ದೂರ ಕಳಿಸಲು ಹೆತ್ತವರಿಗೆ ಮನಸ್ಸಿರಲಿಲ್ಲ . ಅವಳಿಗೂ ಅವರಿಂದ ದೂರಾಗುವ ಆಲೋಚನೆ ಇರಲಿಲ್ಲ ಅದೇ ಕಾರಣದಿಂದ ಅವರು ಮನೆ ಅಳಿಯನನ್ನು ತಂದುಕೊಳ್ಳಲು ಮನಸು ಮಾಡಿದರು.

*******************************

ಸುಶೀಲಮ್ಮನಿಗೆ ೪ ಜನ ಮಕ್ಕಳು ಅದರಲ್ಲೊಬ್ಬಳು ಮಗಳು ಕಾವ್ಯ ಮತ್ತೆ ಮೂರು ಜನ ಗಂಡು ಮಕ್ಕಳು. ಅವರ ಪತಿ ಬಾಂಬೆಯಲ್ಲಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು , ತೀರ ಅಲ್ಲದೇ ಹೋದರೂ ಒಂದು ಮಟ್ಟಿಗೆ ನೆಮ್ಮದಿಯ ಜೀವನ ನಡೆಸುತಿದ್ದರು . ಅದ್ಯಾರ ದೃಷ್ಟಿ ಬಿತ್ತೋ ಅಪಘಾತವೊಂದರಲ್ಲಿ ಅಕಸ್ಮಿಕವಾಗಿ ಕಿಟ್ಟಣ್ಣ ಸಾವನ್ನಪ್ಪಿದರು. ಆಗ ಹಿರಿಯ ಮಗನನ್ನು ಹೊರತುಪಡಿಸಿ ಮತ್ತೆಲ್ಲರೂ ಚಿಕ್ಕವರು. ತಂದೆಯ ಮರಣ ನಂತರ ರವೀಶ ಮನೆಯ ಜವಾಬ್ದಾರಿ ತೆಗೆದುಕೊಂಡು ತನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿದ . ಎರಡನೆಯನು ರಂಜಿತ್ ಅವನೂ ತನ್ನ ಓದು ಅರ್ಧಕ್ಕೆ ನಿಲ್ಲಿಸಿ ಮತ್ತಾವುದೋ ಕೆಲಸಕ್ಕಾಗಿ ಊರು ತೊರೆದು ಚೆನೈ ಸೇರಿಕೊಂಡ . ಕಾವ್ಯಳ ಮದುವೆ ಅದ್ದೂರಿಯಾಗಿ ಮಾಡಿಕೊಟ್ಟು ಮೈ ತುಂಬ ಸಾಲ ಮಾಡಿಕೊಂಡಿದ್ದರು ಸುಶೀಲಮ್ಮ . ಆ ಭಾರ ಮಕ್ಕಳ ಹೆಗಲ ಮೇಲೆ ಇತ್ತು. ಈಗ ರಾಕೇಶ ಕೂಡ ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದ , ಎಲ್ಲರೂ ಕಷ್ಟ ಪಟ್ಟು ಸಾಲ ತೀರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಲಾರಂಭಿಸಿದರು . ಅಣ್ಣಂದಿರಿಬ್ಬರ ವಿವಾಹ ನಂತರ ರಾಕೆಶನಿಗೆ ವಧುವಿಗಾಗಿ ಅನ್ವೇಷಣೆ ಆರಂಭವಾಗಿತ್ತು. ಅವರ ಸೋದರ ಮಾವ ಸುರೇಶ ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತಿದ್ದವರಲ್ಲವೇ, ಅವರಿಂದಲೇ ಅಂಕಿತಾಳ ಮಾಹಿತಿ ದೊರೆಯಿತು . ಅಂಕಿತಾ ತಂದೆಗೆ ಮೊದಲಿಗೆ ಈ ಸಂಬಂಧ ಹಿಡಿಸದೇ ಹೋದರೂ , ದೊಡ್ಡ ಕುಟುಂಬದಲ್ಲಿರುವುದರಿಂದ ಅವನನ್ನು ಮನೆಗೆ ಅಳಿಯನಾಗಿ ಮಾಡಿಕೊಳ್ಳಲು ಸುಲಭವಾಗಬಹುದೆಂದು ,ಯೋಚಿಸಿ ಈ ಮದುವೆಗೆ ಸಮ್ಮತಿಸಿದರು . ಆದರೆ ರಾಕೇಶನಿಗೆ ಮೊದಲಿನಿಂದಲೂ‌ ಅಂಕಿತಾಳ ಸ್ವಭಾವ ಹಿಡಿಸಲಿಲ್ಲ . ಅವಳ ಮಾತಿನ ದರ್ಪ , ಅವಳ ಹೆತ್ತವರ ವರ್ತನೆ ಸರಿ ಇಲ್ಲವೆನಿಸಿತು . ಆದರೆ ಮದ್ಯಮ ವರ್ಗದ ಕುಟುಂಬದ ಸುಶೀಲಮ್ಮನಿಗೆ ಈ ಪ್ರಸ್ಥಾಪ ಹಿಡಿಸಿತ್ತು . ಹೇಗೋ ಮಗನಿಗೆ ಹೆಣ್ಣಿನ ಜೊತೆ ಮನೆ ಕೂಡ ಸಿಗುವಾಗ ಯಾಕೆ ಬೇಡ ಅನ್ನೋದು, ಹುಡುಗಿಯೂ ಸುಂದರವಾಗಿದ್ದಾಳೆ , ಒಳ್ಳೆಯ ಕೆಲಸ ಕೂಡ ಇದೆ , ನನ್ನ ಮಕ್ಕಳಲ್ಲಿ ಯಾರಿಗೂ ಇಷ್ಟು ಒಳ್ಳೆಯ ಸಂಬಂಧ ಸಿಕ್ಕಿಲ್ಲ , ಇವನಾದರೂ ಸುಖವಾಗಿ ಇರಲಿ. ಹೆತ್ತ ಕರುಳು ಮುಂದಾಲೋಚನೆ ಇಲ್ಲದೇ ಮೆಚ್ಚಿಕೊಂಡಿತು. ಮದುವೆಗೂ ಮುನ್ನ ಕರೆ ಮಾಡಿದಾಗೆಲ್ಲ ಗೆಳತಿಯರ ಜೊತೆಗಿರುವೆನೆಂದೋ , ಮತ್ತೇನೋ ಕೆಲಸವಿದೆಯೆಂದೋ ಕರೆ ತುಂಡರಿಸಿದರೆ , ಮತ್ತೆ ಕೆಲವು ಬಾರಿ ರೇಗಿ ಬಿಡುತಿದ್ದ ಅಂಕಿತಾಳ ವರ್ತನೆ ರಾಕೇಶನಿಗೆ ಬೇಸರವಾಗಿತ್ತಾದರೂ , ಹೋಗಲಿ ಅವಳಿಗೆ ಯಾರೊಡನೆಯೂ ಬೆರೆತು ಅಭ್ಯಾಸವಿಲ್ಲದೇ ಇರಬಹುದೆಂದು ತಾನೇ ಸಮಾಧಾಸಿಕೊಂಡ . ದುಬಾರಿ ಒಡವೆಗಳು , ವೈಭೋಗದ ಮದುವೆ , ಯಾವುದಕ್ಕೂ ಕೊರತೆಯಿಲ್ಲದಂತೆ ಮಗಳನ್ನು ಧಾರೆಯೆರೆದ ಜಯಂತ್ ಕುಮಾರ್ .ತನ್ನ ಕುಟುಂಬಕ್ಕಿಂತ ಎಲ್ಲದರಲ್ಲೂ ಕಡಿಮೆಯಾಗಿ ಕಾಣುವ ಪತಿಯ ಕುಟುಂಬ ಮದುವೆಯ ದಿನವೇ ಹಿಡಿಸಲಿಲ್ಲ ಅಂಕಿತಾಳಿಗೆ . ಮದುವೆಗೆ ಮುನ್ನ ರಾಕೇಶ ಮಾವನಿಗೆ ಮನೆಯ ಅಳಿಯನಾಗಲು ತನಗೆ ಒಪ್ಪಿಗೆಯಿಲ್ಲವೆಂದು ಕಡಾ ಖಂಡಿತವಾಗಿ ಹೇಳಿಬಿಟ್ಟಿದ್ದ .ಅದು ಅವರಿಗೆ ಹಿಡಿಸದೆ ಹೋದರೂ , ಹೇಗೋ ಮುಂದೆ ಅವನನ್ನೂ ತಮ್ಮ ದಾರಿಗೆ ತರಬಹುದೆಂಬ ನಂಬಿಕೆ ಅವರಿಗೆ .

ಮದುವೆಯ ಶಾಸ್ತ್ರಕ್ಕೆಂದು 10- 15 ದಿನ ಸುಶೀಲಮ್ಮನ ಕುಟುಂಬದ ಜೊತೆಗಿದ್ದ ಅಂಕಿತಾ , ತವರಿಗೆ ಹೋದವಳು ಮರಳಿ ಬರಲಿಲ್ಲ. ಕೇಳಿದಾಗೆಲ್ಲ ಹೆತ್ತವರ ಆರೋಗ್ಯದ ನೆಪ ಹೇಳಿ ಅಲ್ಲಿಯೇ ಉಳಿದುಕೊಂಡು ಬಿಟ್ಟಳು. ಒಬ್ಬಳೇ ಮಗಳಾದ ಕಾರಣ ರಾಕೇಶನಿಗೂ ಹೆಚ್ಚು ಒತ್ತಾಯ ಮಾಡಲಾಗಲಿಲ್ಲ . ಆದರೆ ಬರು ಬರುತ್ತ ಇದು ಸುಳ್ಳು ನೆಪವೆಂದು ಅರ್ಥವಾದರೂ ಅವನೇನು ಮಾಡಲಾರದ ಪರಿಸ್ಥಿತಿಯಲ್ಲಿದ್ದ . ಈಗಂತೂ ಮಡದಿಗಾಗಿ ಮಾವನ ಮನೆಯಲ್ಲೇ ಉಳಿದುಕೊಳ್ಳುವಂತಾಯಿತು . ಮೊದ- ಮೊದಲು ಪ್ರೀತಿಯಿಂದ ನೋಡಿಕೊಂಡ ಮಾವ ಬರುಬರುತ್ತಾ ತುಂಬಾ ಉದಾಸೀನ ತೋರಿದರು . ಕೆಲವೊಮ್ಮೆ ಅವನಿಗಾಗಿ ಬಿಸಿಯಾದ ಆಡುಗೆ ಮಾಡಲಾಗದಷ್ಟು ಉದಾಸೀನ ತೋರಿದಳು ಅತ್ತೆ .ಇದ್ದಕಿದ್ದಂತೆ ಸುಶೀಲಮ್ಮನ ಆರೋಗ್ಯ ಹದಗೆಟ್ಟಿತ್ತು . ರಾಕೇಶ ತನ್ನ ಮನೆಗೆ ಹೋಗಲೇಬೇಕಾದ ಅನಿವಾರ್ಯತೆ .ಹೊರಟು ನಿಂತ ಮರುಕ್ಷಣವೇ ಅಂಕಿತಾ ತನ್ನ ಅಸಲಿ ಮುಖ ತೋರಿಸಿದಳು
” ನಿನ್ನ ಅಣ್ಣಂದಿರು ಅತ್ತಿಗೆ ಇದ್ದಾರಲ್ಲವೇ , ನೀನ್ಯಾಕೆ ಅಲ್ಲಿಗೆ ಹೋಗಬೇಕು ?”
” ಅವಳು ನನ್ನ ಅಮ್ಮ , ಎಷ್ಟೇ ಮಕ್ಕಳಿದ್ದರೂ , ಅದು ಎಲ್ಲಾ ಮಕ್ಕಳ ಜವಾಬ್ದಾರಿ , ನಾನಲ್ಲಿಗೆ ಹೋಗಲೇಬೇಕು ”
” ಹಾಗಿದ್ದರೇ ನನಗಿಂತ ಆ ಮುದುಕಿ ಮುಖ್ಯನಾ ನಿನಗೆ ?’

ಅವಳಿಂದ ಈ ಮಾತು ಅವನು ನಿರೀಕ್ಷಿಸಿರಲಿಲ್ಲ , ಜೊತೆಗೆ ಅವಳ ಮಾತು ತಪ್ಪೆಂದು ಅತ್ತೆ ಮಾವ ಕೂಡ ಒಂದು ಮಾತು ಆಡಲಿಲ್ಲ . ಇದು ಸಹಿಸಲಾರದೆ ಹೋಗಿದ್ದ ರಾಕೇಶ . ಹೆಚ್ಚೇನೂ ಮಾತನಾಡದೆ ಅಲ್ಲಿಂದ ಹೊರಟ .ತಾಯಿಯ ಆರೋಗ್ಯ ಕೆಲವು ದಿನಗಳಲ್ಲಿ ಸುಧಾರಿಸಿತು . ಆಗಲು ಮತ್ತೆ ಬಾ ಎಂದು ಅಂಕಿತ ಪೀಡಿಸುತ್ತಿದಳು , ತನಗೆ ಯಾವ ಗೌರವ ಇಲ್ಲದೇ, ಮನುಷ್ಯರಂತೆ ಕಾಣದ ಹೆಂಡತಿಯ ಮನೆಗೆ ಹೋಗಲು ರಾಕೇಶನಿಗೆ ಮನಸಿರಲಿಲ್ಲ , ಆದರೂ ಬಲವಂತವಾಗಿ ಕರೆಸಿಕೊಂಡರು . ಕೆಲವು ಸಾಫ್ಟ್ ವೇರ್ ಕಂಪನಿಗಳಂತೆ 100-200 ಉದ್ಯೋಗಿಗಳನ್ನು ಕಡಿತಗೊಳಿಸಿದ್ದರು , ಅದೇ ಸಂದರ್ಭದಲ್ಲಿ ರಾಕೇಶ್ ಕೂಡ ಕೆಲಸ ಕಳೆದುಕೊಂಡ . ಎಷ್ಟೇ ಪ್ರಯತ್ನ ಮಾಡಿದರೂ ಮತ್ತೆ ಕೆಲಸ ಸಿಗಲಿಲ್ಲ , ಈ ಪರಿಸ್ಥಿತಿಯ ಲಾಭ ಪಡೆದು ಜಯಂತ್ ಕುಮಾರ್ ತಮ್ಮ ಟ್ರಾವೆಲ್ಸ್ ನ ಉಸ್ತುವಾರಿ ಕೆಲಸ ನೋಡಿಕೊಳ್ಳಲು ರಾಕೇಶನಿಗೆ ವಹಿಸಿದರು . ಕೆಲಸ ಅಷ್ಟೇನೂ ಕಷ್ಟ ಆಗದಿದ್ದರೂ, ಮನೆಯವರ ತೀರಾ ನಿರ್ಲಕ್ಷ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು . ಅಂಕಿತಾಳ ಉಪಟಳ ಹೇಳ ತೀರದಾಗಿತ್ತು .

ಇತ್ತೀಚೆಗೆ ರಾಕೇಶ ಮನೋ ರೋಗಿಯಂತಾಗಿದ್ದ , ನೆಮ್ಮದಿಗಾಗಿ ಹುಡುಕಾಡಿದ್ದ . ಮನೆ , ಕೆಲಸ ಎಲ್ಲಾ ತನ್ನ ತಂದೆಯಿಂದ ಸಿಕ್ಕಿದಲ್ಲವೇ ರಾಕೇಶನಿಗೆ ಅನ್ನುವ ದುರಹಂಕಾರ ಅಂಕಿತಾಳಿಗೆ . ದಿನ ನಿತ್ಯದ ಉಪದ್ರವ ಮಿತಿ ಮೀರಿದಾಗ ತಾಯಿ ಮತ್ತು ಸಹೋದರರ ಮೊರೆ ಹೋಗಿದ್ದ ರಾಕೇಶ , ಅವರೆಲ್ಲರ ಬೆಂಬಲ ಸಿಕ್ಕಿತು . ಜೊತೆಗೆ ಆಶ್ರಯಕ್ಕೂ ಒಂದು ನೆಲೆ ಸಿಕ್ಕಿದಂತಿತ್ತು ,ದಿನ ನಿತ್ಯವೂ ಸಂದರ್ಶನಕ್ಕೆ ಅಲೆದಾಡುತ್ತಿದ್ದ , ಆದರೆ ಅದ್ಯಾಕೋ ಒಂದು ಕೆಲಸ ಸಿಗಲಿಲ್ಲ . ನೌಕರಿ ‌ಪ್ರೊಫೈಲ್ ನೋಡಿ , ಒಂದು ಕಂಪನಿ ಸಂದರ್ಶನಕ್ಕೆ ಕರೆದಿದ್ದರು.

********************
ಮೇಲಿಂದ ಮೇಲೆ ಸೋಲು ಕಂಡ ರಾಕೇಶನಿಗೆ ಒಂದೊಳ್ಳೆ ಕೆಲಸದ ಜೊತೆ 60 ಸಾವಿರ ಸಂಬಳ ಕೂಡ ಆಫರ್ ಮಾಡಿ ಆಫರ್ ಪತ್ರ ಬಂದಿತ್ತು . ಶ್ರದ್ದೆಯಿಂದ ಕೆಲಸ ಮಾಡಿ ಒಂದೆರಡು ವರುಷಗಳಲ್ಲಿ ಪ್ರಶಸ್ತಿ ಮೂಡಿಗೇರಿಸಿಕೊಂಡಿದ್ದ. ಹಂತ ಹಂತವಾಗಿ ಅವನ ಆರ್ಥಿಕ ಪರಿಸ್ಥಿಯೂ ಸುಧಾರಿಸಿತು . ಅನಿವಾರ್ಯವಾಗಿ ಅಂಕಿತಾ ಪತಿಯ ಮನೆಗೆ ಬರಲೇಬೇಕಾಯಿತು . ಅವಳನ್ನೆಂದೂ ತಿರಸ್ಕರಿಸಲಿಲ್ಲ , ಆದರೆ ಮತ್ತೆಂದೂ ಅವಳ ಮನೆಯಲ್ಲಿ ನೆಲೆಯೂರುವ ಯೋಜನೆ ಮಾಡಲಿಲ್ಲ.

SHANKAR G

Recent Posts

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…

55 years ago