ಶಂಕರ್ ಸಿಹಿಮೊಗ್ಗೆ ಅವರು ಬರೆದ ಕವಿತೆ ‘ಇರುವೆ ಮತ್ತು ಗೋಡೆ’

ಹೊತ್ತು ಹೊತ್ತಿಗೆ
ಗಸ್ತಿನ ಕೆಲಸವ ಹೊತ್ತು
ಶಿಸ್ತಿನ ಸಿಪಾಯಿಯಂತೆ
ನಡೆಯುತ್ತೇನೆ ಹೊರಳುತ್ತೇನೆ
ಏಳುತ್ತೇನೆ ಬೀಳುತ್ತೇನೆ ಕುಣಿಯುತ್ತೇನೆ
ಒಮ್ಮೊಮ್ಮೆ ಹಿಂದಿನವರನ್ನು
ಮತ್ತೊಮ್ಮೆ ಮುಂದಿನವರನ್ನು ತಿವಿಯುತ್ತೇನೆ
ಸಾಲುಗಳ ಬಾಲವನ್ಹಿಡಿದು!
ಚಲನೆಯ ಜೀವಂತ ಪ್ರತೀಕ ಅಮೃತ ನಾನು!
ನಿನ್ನಂತೆ ಜಡವಾಗಿ ನಿಂತಿರುವುದು ಎಷ್ಟು ದಿನ?
ಇರುವೆಯು ಕೇಳಿತು ಗೋಡೆಯನು!

ಜಡವಿಲ್ಲದೆ ಚಲನೆಯೇ
ಚಲನೆ ಇಲ್ಲದೆ ಜಡವೇ
ಒಂದಿಲ್ಲದೆ ಮತ್ತೊಂದಕ್ಕೆ 
ಬೆಲೆಯು ಇಲ್ಲಿ ಎಲ್ಲಿದೆ?
ಗೋಡೆಯು ಕೇಳಿತು ಇರುವೆಯನು!

ನೋಡಲ್ಲಿ ಹಾರುತಿದೆ ಹಕ್ಕಿ 
ಹರಿಯುತಿದೆ ನೀರು
ಆ ಮೂಲೆಯಿಂದ ಈ ಮೂಲೆಗೆ
ಬೀಸುತಿದೆ ಗಾಳಿ 
ಎಲೆಎಲೆಗಳು ಚಿಗುರುತ್ತಿವೆ
ಹೂ-ಕಾಯಿ ಹಣ್ಣು ಪರಿಮಳವ ಬೀರುತ್ತಿವೆ
ಚಲನೆಯಲ್ಲಿದೆ ಬದುಕು!
ನಿಂತಲ್ಲೇ ನಿಂತಿರುವೆ ನೀನು!
ಹರಿದಾಡುವ ಹುಳ ಹುಪ್ಪಟೆಗಳ ನೋಡು
ಅವುಗಳ ಸಡಗರದ ಮಾತುಕತೆಯ ಕೇಳು!
ಅವುಗಳು ಹೇಳುತ್ತವೆ ಚಲನೆಯಲ್ಲಿದೆ ಬದುಕು!

ಕಲ್ಲು ಮಣ್ಣು ಜಡವಾಗದೆ ಹೋಗಿದ್ದರೆ
ನೀನು ಹೇಗೆ ಕಟ್ಟುತ್ತಿದ್ದೆ ಗೂಡು?
ನೀನು ಚಲಿಸುವ ಹಾದಿ ನಾನು
ಜಡವಾಗದೆ ಹೋಗಿದ್ದರೆ, 
ನೀನು ಹೇಗೆ ಚಲಿಸುತ್ತಿದ್ದೆ?
ಮಳೆ ಬಿಸಿಲು ಛಳಿಗೆ 
ಬೆಚ್ಚಗಿನ ಕಾವ ಕೊಟ್ಟು 
ನೀನು ಕಟ್ಟಿದ ಗೂಡಿನೊಳಗೆ 
ತಾಯಂತೆ ಮರದ ಬೇರಂತೆ 
ಪೊರೆಯುವುದು ಜಡ!
ಚಲನೆಯ ಬದುಕು ಜಡದ ಮೇಲೆಯೇ ನಿಂತಿದೆ!

ಬಯಲಲ್ಲಿ ಕಾಡಲ್ಲಿ ಊರಲ್ಲಿ 
ಹೊಲದಲ್ಲಿ ಅಷ್ಟ ದಿಕ್ಕುಗಳಲ್ಲಿ 
ಚಲನೆಯದ್ದೇ ಪರಮಾಧಿಕಾರ!
ನಿನ್ನದೇನಿದೆ ಇಲ್ಲಿ ನೋಡು!
ಉಸಿರಿಲ್ಲದ ಹೆಸರಿಲ್ಲದ 
ರೂಪವಿಲ್ಲದ, ನಿಂತಲ್ಲಿಯೇ ನಿಂತ
ಅಮೂರ್ತ ರೂಪಿ ಜಡ ನೀನು 
ನಿರ್ಗತಿಕ ಜಡ ನೀನು!

ಕೇಳಿಲ್ಲಿ ಇರುವೆಯೇ
ನೋಡಲ್ಲಿ ವಸಂತದ ಋತುವಿಗೆ
ಎಲೆಎಲೆ ಚಿಗುರಿದರು 
ನಿಂತಿಲ್ಲವೇ ಮರ ಕಾಡೊಳಗೆ?
ಹರಿವ ನೀರಿನ ತಳ ನೆಲ
ಜಡವಲ್ಲವೇನು?
ಬೆಳೆವ ಪೈರಿನ ಹೊಲ
ಜಡವಾಗಿ ನಿಂತಿಲ್ಲವೇನು?
ನೋಡುವವರ 
ಕಣ್ಣೋಟದಲ್ಲಿದೆ ಬದುಕು!
ಭೂಮಿಯೇ ತಿರುಗುತ್ತಿರುವಾಗ
ಶಿಲಾಪದರದೊಳಗೆ ಬೇರೂರಿ ನಿಂತ
ನಾನು ಜಡವಾಗಿರಲು ಹೇಗೆ ಸಾಧ್ಯ?
ನಾನು ನಿಂತಲ್ಲಿಯೇ ತಿರುಗುತ್ತಿರುವೆ
ಓಡುತ್ತಿರುವೆ ಚಲಿಸುತ್ತಿರುವೆ ಹಾಡುತ್ತಿರುವೆ!
ಧ್ಯಾನಸ್ಥ ಸ್ಥಿತಿಯಲ್ಲಿ ಗುನುಗುತ್ತಿರುವೆ
ಜಡವಿಲ್ಲದೆ ಚಲನೆ ಇಲ್ಲ!
ಚಲನೆ ಇಲ್ಲದೆ ಜಡವಿಲ್ಲ!
ನಾನಿಲ್ಲದೆ ನೀನಿಲ್ಲ,
ನೀನಿಲ್ಲದೆ ನಾನಿಲ್ಲ!
ಸುಪ್ತವಾಗಿ ಜಡದಲ್ಲಿ ಅಡಕವಾಗಿದೆ ಚಲನೆ!
ಚಲನೆಯ ಬದುಕು ಜಡದ ಮೇಲೆಯೇ ನಿಂತಿದೆ!
SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago