ಶಂಕರ್ ಸಿಹಿಮೊಗ್ಗೆ ಅವರು ಬರೆದ ಕವಿತೆ ‘ಇರುವೆ ಮತ್ತು ಗೋಡೆ’

ಹೊತ್ತು ಹೊತ್ತಿಗೆ
ಗಸ್ತಿನ ಕೆಲಸವ ಹೊತ್ತು
ಶಿಸ್ತಿನ ಸಿಪಾಯಿಯಂತೆ
ನಡೆಯುತ್ತೇನೆ ಹೊರಳುತ್ತೇನೆ
ಏಳುತ್ತೇನೆ ಬೀಳುತ್ತೇನೆ ಕುಣಿಯುತ್ತೇನೆ
ಒಮ್ಮೊಮ್ಮೆ ಹಿಂದಿನವರನ್ನು
ಮತ್ತೊಮ್ಮೆ ಮುಂದಿನವರನ್ನು ತಿವಿಯುತ್ತೇನೆ
ಸಾಲುಗಳ ಬಾಲವನ್ಹಿಡಿದು!
ಚಲನೆಯ ಜೀವಂತ ಪ್ರತೀಕ ಅಮೃತ ನಾನು!
ನಿನ್ನಂತೆ ಜಡವಾಗಿ ನಿಂತಿರುವುದು ಎಷ್ಟು ದಿನ?
ಇರುವೆಯು ಕೇಳಿತು ಗೋಡೆಯನು!

ಜಡವಿಲ್ಲದೆ ಚಲನೆಯೇ
ಚಲನೆ ಇಲ್ಲದೆ ಜಡವೇ
ಒಂದಿಲ್ಲದೆ ಮತ್ತೊಂದಕ್ಕೆ 
ಬೆಲೆಯು ಇಲ್ಲಿ ಎಲ್ಲಿದೆ?
ಗೋಡೆಯು ಕೇಳಿತು ಇರುವೆಯನು!

ನೋಡಲ್ಲಿ ಹಾರುತಿದೆ ಹಕ್ಕಿ 
ಹರಿಯುತಿದೆ ನೀರು
ಆ ಮೂಲೆಯಿಂದ ಈ ಮೂಲೆಗೆ
ಬೀಸುತಿದೆ ಗಾಳಿ 
ಎಲೆಎಲೆಗಳು ಚಿಗುರುತ್ತಿವೆ
ಹೂ-ಕಾಯಿ ಹಣ್ಣು ಪರಿಮಳವ ಬೀರುತ್ತಿವೆ
ಚಲನೆಯಲ್ಲಿದೆ ಬದುಕು!
ನಿಂತಲ್ಲೇ ನಿಂತಿರುವೆ ನೀನು!
ಹರಿದಾಡುವ ಹುಳ ಹುಪ್ಪಟೆಗಳ ನೋಡು
ಅವುಗಳ ಸಡಗರದ ಮಾತುಕತೆಯ ಕೇಳು!
ಅವುಗಳು ಹೇಳುತ್ತವೆ ಚಲನೆಯಲ್ಲಿದೆ ಬದುಕು!

ಕಲ್ಲು ಮಣ್ಣು ಜಡವಾಗದೆ ಹೋಗಿದ್ದರೆ
ನೀನು ಹೇಗೆ ಕಟ್ಟುತ್ತಿದ್ದೆ ಗೂಡು?
ನೀನು ಚಲಿಸುವ ಹಾದಿ ನಾನು
ಜಡವಾಗದೆ ಹೋಗಿದ್ದರೆ, 
ನೀನು ಹೇಗೆ ಚಲಿಸುತ್ತಿದ್ದೆ?
ಮಳೆ ಬಿಸಿಲು ಛಳಿಗೆ 
ಬೆಚ್ಚಗಿನ ಕಾವ ಕೊಟ್ಟು 
ನೀನು ಕಟ್ಟಿದ ಗೂಡಿನೊಳಗೆ 
ತಾಯಂತೆ ಮರದ ಬೇರಂತೆ 
ಪೊರೆಯುವುದು ಜಡ!
ಚಲನೆಯ ಬದುಕು ಜಡದ ಮೇಲೆಯೇ ನಿಂತಿದೆ!

ಬಯಲಲ್ಲಿ ಕಾಡಲ್ಲಿ ಊರಲ್ಲಿ 
ಹೊಲದಲ್ಲಿ ಅಷ್ಟ ದಿಕ್ಕುಗಳಲ್ಲಿ 
ಚಲನೆಯದ್ದೇ ಪರಮಾಧಿಕಾರ!
ನಿನ್ನದೇನಿದೆ ಇಲ್ಲಿ ನೋಡು!
ಉಸಿರಿಲ್ಲದ ಹೆಸರಿಲ್ಲದ 
ರೂಪವಿಲ್ಲದ, ನಿಂತಲ್ಲಿಯೇ ನಿಂತ
ಅಮೂರ್ತ ರೂಪಿ ಜಡ ನೀನು 
ನಿರ್ಗತಿಕ ಜಡ ನೀನು!

ಕೇಳಿಲ್ಲಿ ಇರುವೆಯೇ
ನೋಡಲ್ಲಿ ವಸಂತದ ಋತುವಿಗೆ
ಎಲೆಎಲೆ ಚಿಗುರಿದರು 
ನಿಂತಿಲ್ಲವೇ ಮರ ಕಾಡೊಳಗೆ?
ಹರಿವ ನೀರಿನ ತಳ ನೆಲ
ಜಡವಲ್ಲವೇನು?
ಬೆಳೆವ ಪೈರಿನ ಹೊಲ
ಜಡವಾಗಿ ನಿಂತಿಲ್ಲವೇನು?
ನೋಡುವವರ 
ಕಣ್ಣೋಟದಲ್ಲಿದೆ ಬದುಕು!
ಭೂಮಿಯೇ ತಿರುಗುತ್ತಿರುವಾಗ
ಶಿಲಾಪದರದೊಳಗೆ ಬೇರೂರಿ ನಿಂತ
ನಾನು ಜಡವಾಗಿರಲು ಹೇಗೆ ಸಾಧ್ಯ?
ನಾನು ನಿಂತಲ್ಲಿಯೇ ತಿರುಗುತ್ತಿರುವೆ
ಓಡುತ್ತಿರುವೆ ಚಲಿಸುತ್ತಿರುವೆ ಹಾಡುತ್ತಿರುವೆ!
ಧ್ಯಾನಸ್ಥ ಸ್ಥಿತಿಯಲ್ಲಿ ಗುನುಗುತ್ತಿರುವೆ
ಜಡವಿಲ್ಲದೆ ಚಲನೆ ಇಲ್ಲ!
ಚಲನೆ ಇಲ್ಲದೆ ಜಡವಿಲ್ಲ!
ನಾನಿಲ್ಲದೆ ನೀನಿಲ್ಲ,
ನೀನಿಲ್ಲದೆ ನಾನಿಲ್ಲ!
ಸುಪ್ತವಾಗಿ ಜಡದಲ್ಲಿ ಅಡಕವಾಗಿದೆ ಚಲನೆ!
ಚಲನೆಯ ಬದುಕು ಜಡದ ಮೇಲೆಯೇ ನಿಂತಿದೆ!
SHANKAR G

Recent Posts

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago