ಮಕ್ಕಳ ಸಾಹಿತ್ಯ

ಗಿರಿಜಾಶಂಕರ್ ಜಿ ಎಸ್ ಇಡೇಹಳ್ಳಿ ಅವರು ಬರೆದ ಲೇಖನ ‘ಮಕ್ಕಳಿಗೆ ಬೇಕಿರುವುದು ಬದುಕಿನ ಪಾಠ’

ಕಳೆದ ಕೆಲವು ತಿಂಗಳಿಂದ ಸಮೂಹ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಮಕ್ಕಳ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಶಿಕ್ಷಣ ಮತ್ತು ಸಮಾಜದಲ್ಲಿ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳು ಎಷ್ಟರಮಟ್ಟಿಗೆ ತಲ್ಲಣಗೊಳಿಸಿವೆ ಎಂಬುದನ್ನು ಮನಗಾಣಬಹುದು. ಒಂದು ಶಾಲೆಯ ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ ಚೀಟಿ ಇಟ್ಟಿದ್ದಳೆಂದು ತರಗತಿ ಶಿಕ್ಷಕರು ಬೈದಿದ್ದರಿಂದ ಅವಮಾನ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಆಗ ಪಾಲಕರು ಮತ್ತು ಗ್ರಾಮಸ್ಥರು ಶಾಲೆಯ ಮುಂದೆ ವಿದ್ಯಾರ್ಥಿನಿಯ ಶವ ಇಟ್ಟು ಧರಣಿ ಕೂತರು. ಅವರೆಲ್ಲಾ “ಹುಡುಗಿಯ ಸಾವಿಗೆ ಶಿಕ್ಷಕರೇ ಕಾರಣ” ಎಂದು ಪ್ರತಿಭಟನೆ ಮಾಡಲು ಮುಂದಾದರು.

ಶಾಲೆಯಲ್ಲಿ ಸರಿಯಾಗಿ ಓದುತ್ತಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಯೊಬ್ಬ ತನ್ನ ಸಹ ವಿದ್ಯಾರ್ಥಿಗಳೊಂದಿಗೆ ಐದು ತಿಂಗಳ ಗರ್ಭಿಣಿ ಶಿಕ್ಷಕಿಯನ್ನು ಹಿಡಿದು ಜಗ್ಗಾಡಿದ ಘಟನೆ ಮೊನ್ನೆ ತಾನೆ ವರದಿಯಾಗಿದೆ. ಪರೀಕ್ಷೆಯಲ್ಲಿ ಚೀಟಿ ಇಟ್ಟು ಸಿಕ್ಕಿಬಿದ್ದ ಹುಡುಗನೊಬ್ಬನನ್ನು ಶಿಕ್ಷಕಿ ಹೊರಗೆ ನಿಲ್ಲುವಂತೆ ಸೂಚಿಸಿದ್ದರು. ಆಗ ಹುಡುಗ ಅಪಾರ್ಟ್ಮೆಂಟ್‌ಗೆ ತೆರಳಿ ಕಟ್ಟಡದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕಾರಣ ಅವನಿಗೆ ಸಹಿಸಲಾರದ ಅವಮಾನವಾಗಿತ್ತು. ಪೋಷಕರು ಸಿಟ್ಟಿಗೆದ್ದು ಶಿಕ್ಷಕಿ ಮೇಲೆ ಕೇಸು ದಾಖಲಿಸಿದ್ದರು. ಪಟಾಕಿ ಹಚ್ಚಿದ್ದಕ್ಕೆ ಪ್ರಾಂಶುಪಾಲರು ಬೈದಿದ್ದರಿಂದ ಮನೆಗೆ ಬಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಕೇವಲ ಒಂದು ಅಂಕ ಕಡಿಮೆ ಆಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ, ಒಂದು ರ‍್ಯಾಂಕ್ ತಪ್ಪಿಹೋಗಿದ್ದಕ್ಕೆ ಹುಡುಗಿಯ ಆತ್ಮಹತ್ಯೆ, ಏಳನೆಯ ತರಗತಿ ವಿದ್ಯಾರ್ಥಿಯೊಬ್ಬ ಅಪ್ಪ ಬೈದ ಕಾರಣಕ್ಕಾಗಿ ಅವಮಾನಗೊಂಡು ಆತ್ಮಹತ್ಯೆ, ಅಮ್ಮ ಬುದ್ಧಿವಾದ ಹೇಳಿದ್ದಕ್ಕಾಗಿ ಮಗಳ ಆತ್ಮಹತ್ಯೆ, ಮನೆಯಲ್ಲಿ ಯಾರಾದರೂ ಹಿರಿಯರು ಮೊಬೈಲ್ ಹೆಚ್ಚು ಬಳಸಬೇಡ ನಿನ್ನ ಅಭ್ಯಾಸಕ್ಕೆ ತೊಂದರೆ ಆಗುತ್ತೆ ಅಂದರೆ ಅದಕ್ಕೂ ಆತ್ಮಹತ್ಯೆ. ಟಿವಿ ಹೆಚ್ಚು ನೋಡಬೇಡ ಕಲಿಕೆಯ ಮೇಲೆ ಪರಿಣಾಮ ಬೀರುತ್ತೆ ಅಂತ ಹಿತವಚನ ಹೇಳಿದ್ದಕ್ಕೆ ಆತ್ಮಹತ್ಯೆ. ಹೀಗೆ ಸಣ್ಣಪುಟ್ಟ ಕಾರಣಗಳಿಗಾಗಿ ಮಕ್ಕಳು ತಮ್ಮ ಜೀವಕ್ಕೇ ಕುತ್ತು ತರಿಸಿಕೊಳ್ಳುತ್ತಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಶೈಕ್ಷಣಿಕ ಪರಿಸರ ಮತ್ತು ಸಾಮಾಜಿಕ ಬದುಕಿನಲ್ಲೂ ಮಕ್ಕಳ ಮೇಲೆ ಒತ್ತಡಗಳು ಹೆಚ್ಚುತ್ತಿವೆ. ಈ ರೀತಿಯ ಹತ್ತು ಹಲವು ದುರ್ಘಟನೆಗಳಲ್ಲಿ ಶಿಕ್ಷಕರು, ತಂದೆ ತಾಯಿ, ಪೋಷಕರದೂ ಕೆಲವೊಮ್ಮೆ ತಪ್ಪಾಗಿರಬಹುದು. ನನ್ನ ಮಗ/ಮಗಳು ಎಲ್ಲರಿಗಿಂತಲೂ ಹೆಚ್ಚು ಅಂಕ ಪಡೆಯಬೇಕು, ಬೇಗ ಕೋಟ್ಯಧೀಶ ಆಗುವಂಥ ಕೆಲಸಕ್ಕೆ ಸೇರಬೇಕು, ಪಕ್ಕದ ಮನೆಯ ಹುಡುಗನಿಗಿಂತ ನನ್ನ ಮಗ ವಿಭಿನ್ನವಾಗಿರಬೇಕು, ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡಬೇಕು, ವಿದೇಶದಲ್ಲಿ ನೆಲಸಬೇಕು, ಅದನ್ನು ನಾಲ್ಕಾರು ಜನ ಹತ್ತಿರ ಬಿಂಕ ಬಿಗುಮಾನದಿಂದ ಹೇಳಿಕೊಂಡು ತಮ್ಮ ಸ್ವಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ದುರಾಸೆಯಿಂದ ಕೆಲವು ತಂದೆ ತಾಯಿಗಳಿಂದಲೂ ಇಂತಹ ಪ್ರಕರಣಗಳು ನಡೆಯುತ್ತಿರಬಹುದು.

ಹಾಗಾದರೆ ತಂದೆ ತಾಯಿಯರು ಮಕ್ಕಳ ಬಗ್ಗೆ ಆಸೆ ಇಟ್ಟುಕೊಳ್ಳಬಾರದೆ? ಖಂಡಿತಾ ಆಸೆ ಇರಬೇಕು. ಹಣ, ಆಧಿಕಾರ, ಐಶ್ವರ್ಯ ಹೆಚ್ಚಾಗಬೇಕೆಂಬ ಆಸೆಯಿಂದಲ್ಲ. ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಇಟ್ಟುಕೊಂಡ ವ್ಯಕ್ತಿಯಾಗಬೇಕೆಂಬ ಹಂಬಲದಿAದ. ಅಲ್ಲದೆ ತಮ್ಮ ಮಕ್ಕಳಿಗೆ ಮನಸ್ಥಿತಿ, ಬುದ್ಧಿ ಸಾಮರ್ಥ್ಯ, ಆಸಕ್ತಿ, ಆಲೋಚನೆಗಳನ್ನು ಗ್ರಹಿಸಿ ಮಾರ್ಗದರ್ಶನ ನೀಡುವುದು ಒಳಿತು. ಇಲ್ಲವಾದರೆ ಇಂತಹ ಪ್ರಕರಣಗಳು ದಿನನಿತ್ಯ ನೋಡಬೇಕಾದೀತು. ಕೆಲವೊಂದು ಸಂದರ್ಭದಲ್ಲಿ ಇಲಾಖೆಯ ನೀತಿನಿಯಮಗಳಿಂದ ಕಂಗೆಟ್ಟ ಶಿಕ್ಷಕರ ಮನಸ್ಥಿತಿಯಿಂದಲೂ ಇಂತಹ ಘಟನೆಗಳು ನಡೆಯುತ್ತಿರಬಹುದು. ಪರೀಕ್ಷೆಯಲ್ಲಿ ಎಲ್ಲರೂ ಪಾಸಾಗಲೇಬೇಕು, ಹೆಚ್ಚು ಅಂಕಗಳನ್ನು ಪಡೆಯಲೇಬೇಕು, ಅಂಕಗಳಿAದ ಶಾಲೆಗಳ ಗುಣಮಟ್ಟವನ್ನು ಅಳೆಯುವ ಮಾನದಂಡ, ಕಡಿಮೆ ಫಲಿತಾಂಶ ಬಂದರೆ ಶಿಕ್ಷಕ ಸಮುದಾಯ ಅನುಭವಿಸುವ ಯಾತನೆಗಳು…. ಹೀಗೆ ಒಂದಿಲ್ಲೊಂದು ನಿಯಮಗಳಿಂದ ಶಿಕ್ಷಕ ಸಮುದಾಯ ದಿಕ್ಕೆಟ್ಟಿದೆ. ಕೆಲವೊಮ್ಮೆ ಮಾನಸಿಕ ಒತ್ತಡಕ್ಕೆ ಒಳಗಾದ ಕೆಲವು ಶಿಕ್ಷಕರ ವರ್ತನೆಗಳಿಂದಲೂ ಇಂತಹ ಅವಘಡಗಳು ಸಂಭವಿಸುತ್ತಿವೆ ಎನಿಸುತ್ತದೆ.

ಈ ಎಲ್ಲಾ ಆಯಾಮಗಳಿಂದಲೂ ಗಮನಿಸಿದಾಗ ಇಂತಹ ದುರ್ಘಟನೆಗಳು ನಡೆಯುತ್ತಿರುವುದಕ್ಕೆ ಉತ್ತರ ಹುಡುಕಿದರೆ ಪ್ರತಿಯೊಬ್ಬರ ಹೆಗಲಿಗೆ ಬಂದು ಕೂರುತ್ತದೆ. ಬದುಕೆಂದರೆ ಅಂಕಗಳಲ್ಲ, ಪ್ರತಿಷ್ಠೆಯಲ್ಲ, ಬಲವಂತವಾಗಿ ಹೀಗೆ ನಡೆದುಕೊಳ್ಳಬೇಕೆಂದು ಹೇರುವ ಕ್ರಿಯೆಯಲ್ಲ. ಅಂಕಗಳಿಗಿಂತಲೂ ಬದುಕು ದೊಡ್ಡದು ಎನ್ನುವುದನ್ನು ಮಕ್ಕಳಿಗೆ ತಿಳಿಸಬೇಕಾಗಿದೆ. ಈ ಜಗತ್ತಿನಲ್ಲಿ ತುಂಬಾ ಅರ್ಥಪೂರ್ಣ ಬದುಕನ್ನು ನಡೆಸಿದವರೆಲ್ಲಾ ಅಂಕಗಳಿಂದಲೇ ಬದುಕನ್ನು ನಡೆಸುತ್ತಿಲ್ಲ. ಶಾಲೆಯ ಮೆಟ್ಟಿಲನ್ನು ತುಳಿಯದೇ ಇರುವ ಸಹಸ್ರಾರು ಜನ ಈ ಸಮಾಜದಲ್ಲಿ ಸಾರ್ಥಕ ಬದುಕನ್ನು ನಡೆಸುತ್ತಿದ್ದಾರೆ. ಶಿಕ್ಷಣ ಇರುವುದು ಮನುಷ್ಯ ಸಮಾಜದಲ್ಲಿ ಸನ್ಮಾರ್ಗದಲ್ಲಿ ಬದುಕಬೇಕೆಂಬ ಮೌಲ್ಯ ಹೇಳುವುದಕ್ಕಾಗಿಯೇ ಹೊರತು ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದಕ್ಕಲ್ಲ ಎನ್ನುವ ಭಾವ ಎಲ್ಲರಲ್ಲಿ ಬಂದರೆ ಖಂಡಿತಾ ಇಂತಹ ದುರ್ಘಟನೆಗಳು ನಡೆಯಲು ಸಾಧ್ಯವಿಲ್ಲ.

SHANKAR G

Recent Posts

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

55 years ago

ಮೇ 2025 ಮಿಂಚುಳ್ಳಿ ಸಂಚಿಕೆ

ಮೇ ೨೦೨೫ ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

55 years ago

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…

55 years ago

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago