ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು. ಹಳದಿ ಬಾಲವಿರಬೇಕು. ನಡಿಗೆ ಮೋಹಕವಾಗಿರಬೇಕು. ಒಂದೇ ಕಿವಿಯನ್ನು ಹೊಂದಿರಬೇಕು. ಇದು ವ್ಯಾಸಮುನಿಗಳು ಸೂಚಿಸಿದ ಕುದುರೆಯ ಲಕ್ಷಣ.
ಯಜ್ಞದ ರೀತಿ ಹೇಗೆ ಎನ್ನುವುದನ್ನು ಅರುಹತೊಡಗಿದರು. ಯಜ್ಞದಲ್ಲಿ ಪಾಲು ಪಡೆಯುವ ಪಂಡಿತ ವರ್ಗವನ್ನು ಸಂಪ್ರೀತಗೊಳಿಸುವುದು ಯಾವ ಬಗೆಯಲ್ಲಿ ಎಂಬ ವಿವರಣೆಯಿತ್ತು ಅವರ ಆ ವರ್ಣನೆಯಲ್ಲಿ. ಇಪ್ಪತ್ತು ಸಾವಿರ ವಿದ್ವಾಂಸರ ಅಗತ್ಯವಿತ್ತು ಯಾಗಕ್ಕೆ. ಹಾಗೆ ಯಜ್ಞದಲ್ಲಿ ಪಾಲು ಪಡೆದ ಅನಿತೂ ಪಂಡಿತರಿಗೆ ವಸ್ತ್ರದಾನವನ್ನು ಮಾಡಬೇಕಿತ್ತು. ಒಬ್ಬೊಬ್ಬರಿಗೆ ಒಂದೊಂದು ಬಳ್ಳದಷ್ಟು ಮುತ್ತುಗಳನ್ನು ಕೊಡಬೇಕಿತ್ತು. ಒಬ್ಬೊಬ್ಬರಿಗೂ ಸಾವಿರ ಗೋವುಗಳನ್ನು ದಾನ ನೀಡಬೇಕಿತ್ತು. ಅಷ್ಟೂ ಜನರ ಮನ ಸಂತೃಪ್ತಿಯಾಗುವಷ್ಟು ಚಿನ್ನವನ್ನು ಹಂಚಬೇಕಿತ್ತು.
ಈ ಬಗೆಯ ಗೌರವಾದರಗಳನ್ನು ಪಡೆದ ಪಂಡಿತರು ಅಪ್ಪಣೆಯನ್ನು ಕೊಟ್ಟ ಬಳಿಕ ‘ಉನ್ನತ ಪರಾಕ್ರಮಿಗಳೆನಿಸಿಕೊಂಡವರು ತಡೆಯಲಿ ಇದನ್ನು’ ಎಂಬ ಸಾಲನ್ನು ಬರೆದ ಪತ್ರವನ್ನು ಯಾಗದ ಕುದುರೆಯ ಹಣೆಗೆ ಕಟ್ಟಿ ಒಂದು ವರ್ಷ ಪರ್ಯಂತ ಅದನ್ನು ತಿರುಗಾಟಕ್ಕೆ ಬಿಡಬೇಕಿತ್ತು. ಹಾಗೆ ಸ್ವಚ್ಛಂದವಾಗಿ ಚಲಿಸುವ ಅವಕಾಶ ಪಡೆದ ಕುದುರೆ ಹೆಜ್ಜೆಹೆಜ್ಜೆಗಳನ್ನಿಡುವಾಗ ಅದರ ಸಂಗಡ ಇದ್ದವರು ಹೊನ್ನಿನ ರಾಶಿಯನ್ನು ಸುರಿಯುತ್ತಲೇ ಇರಬೇಕು. ಕುದುರೆ ಯಾವ ರಾಜ್ಯವನ್ನು ಪ್ರವೇಶಿಸುತ್ತದೋ ಅಲ್ಲಿಯ ಒಡೆಯರಿಗಿದ್ದುದು ಎರಡೇ ಆಯ್ಕೆ. ಒಂದೋ ಕುದುರೆಯನ್ನು ಕಟ್ಟಿ ಯುದ್ಧಕ್ಕೆ ಸಿದ್ಧರಾಗಬೇಕು. ಇಲ್ಲವಾದರೆ ಕುದುರೆಯ ಜೊತೆಗಿದ್ದವರ ಸಾರ್ವಭೌಮತ್ವವನ್ನು ಒಪ್ಪಿಕೊಂಡು ಯಾಗಕ್ಕೆ ಬೇಕಾದ ಧನಕನಕಗಳನ್ನು ಸಮರ್ಪಿಸಬೇಕು.
ಹೀಗೆ ಕುದುರೆಯ ತಿರುಗಾಟದ ಒಂದು ವರ್ಷದ ಅವಧಿಯಲ್ಲಿ ಯಾಗದ ಹೊಣೆಯನ್ನು ವಹಿಸಿಕೊಂಡ ನನ್ನಣ್ಣ ಧರ್ಮರಾಯ ಅಸಿಪತ್ರ ಎಂಬ ಶ್ರೇಷ್ಠವಾದ ವ್ರತವನ್ನು ನಡೆಸಿಕೊಂಡು ಇರಬೇಕಿತ್ತು.
ಈ ತೆರದಲ್ಲಿ ಅಶ್ವಮೇಧ ಯಾಗದ ರೀತಿನೀತಿಗಳನ್ನು ವ್ಯಾಸರಿಂದ ಕೇಳಿತಿಳಿದುಕೊಂಡ ನನ್ನಣ್ಣನ ಹಣೆಯಲ್ಲಿ ಚಿಂತೆಯ ಗೆರೆಗಳು. ಯಾಗಕ್ಕೆ ಬೇಕಾಗುವಷ್ಟು ಅಸೀಮ ಸಂಪತ್ತು ಅವನಲ್ಲಿರಲಿಲ್ಲ. ಉನ್ನತೋನ್ನತ ಲಕ್ಷಣದ ಕುದುರೆ ಸಿಕ್ಕುವುದೆಲ್ಲಿ ಎನ್ನುವುದು ಗೊತ್ತಿರಲಿಲ್ಲ. ಆಪದ್ಬಾಂಧವ ಶ್ರೀಕೃಷ್ಣ ಆ ಸಮಯದಲ್ಲಿ ಹಸ್ತಿನಾವತಿಯಲ್ಲಿ ಇರಲಿಲ್ಲ. ಹೀಗಿರುವಾಗ ಇಂತಹದ್ದೊಂದು ಶ್ರೇಷ್ಠ ಯಾಗವನ್ನು ತನ್ನಿಂದ ಪೂರೈಸಲಾದೀತೇ ಎಂಬ ಆತಂಕ ಧರ್ಮಜನ ಉರದಲ್ಲಿ ಉರುಳಾಟ ನಡೆಸತೊಡಗಿತ್ತು.
ಹೀಗಿದ್ದಾಗಲೇ ಅವನ ಈ ಚಿಂತೆಯನ್ನೂ ಉಪಶಮನಗೊಳಿಸಿದರು ವ್ಯಾಸರು, ಹಿಂದಿನೆಲ್ಲಾ ಚಿಂತೆಗಳನ್ನು ದೂರಮಾಡಿದ ರೀತಿಯಲ್ಲಿಯೇ. ಹಿಂದೊಮ್ಮೆ ಮರುತ ಎಂಬ ಅರಸ ಅಶ್ವಮೇಧ ಯಾಗವನ್ನು ಮಾಡಿ ಬ್ರಾಹ್ಮಣರು ಹೊರಲಾಗದಷ್ಟು ಧನಕನಕಗಳನ್ನು ಅವರಿಗೆ ದಾನ ನೀಡಿದ್ದನಂತೆ. ಅಷ್ಟೊಂದು ಭಾರವನ್ನು ಹೊತ್ತೊಯ್ಯಲಾರದ ವಿಪ್ರರು ಹಿಮಾಲಯದ ತಪ್ಪಲಿನಲ್ಲಿಯೇ ಅದನ್ನು ಸುರಿದು ಹೋಗಿದ್ದರಂತೆ. ಅದನ್ನೀಗ ತಂದರೆ ಯಾಗಕ್ಕೆ ಬೇಕಾದ ಸಂಪತ್ತು ಕೈವಶವಾದಂತೆ.
ವ್ಯಾಸರ ಈ ಮಾತನ್ನು ಕೇಳುತ್ತಿದ್ದಂತೆಯೇ ಬ್ರಾಹ್ಮಣರ ಸಂಪತ್ತನ್ನು ತಾನೀಗ ಬಳಸಿಕೊಂಡರೆ ಪಾಪಕ್ಕೆ ತುತ್ತಾಗೆನೇ ಎಂಬ ಧರ್ಮಪ್ರಜ್ಞೆ ಧರ್ಮಜನನ್ನು ಕಾಡಿತು. ಸಕಲ ಭೂಮಂಡಲವೇ ವಿಪ್ರರದಾಗಿರುವಾಗ ಅಂತಹ ಚಿಂತೆ ಬೇಡ ಎಂಬ ಉತ್ತರ ವ್ಯಾಸರಿಂದ ಬಂತು.
ಭದ್ರಾವತಿಯಲ್ಲಿರುವ ಯೌವನಾಶ್ವ ಎಂಬ ಅರಸ ಹತ್ತು ಅಕ್ಷೋಹಿಣಿ ಸೈನ್ಯದ ಒಡೆಯನಾಗಿದ್ದ. ಯಾಗಕ್ಕೆ ಯೋಗ್ಯವಾದ ಕುದುರೆ ಇದ್ದುದು ಅವನಲ್ಲಿ. ಶರ್ಯವಿದ್ದರೆ ಅದನ್ನು ತರಬಹುದು ಎಂದರು ಮುನಿಗಳು. ಭಯವನ್ನು ತೊರೆದು ಯಾಗವನ್ನು ಪೂರೈಸು ಎಂಬ ಅಭಯದ ನುಡಿಯನ್ನಾಡಿದರು ಅವರು.
ಧರ್ಮವೀರನ ಮೊಗಮುಗಿಲನ್ನು ಮುಸುಗಿದ್ದ ಮೌನಮೇಘ ಕರಗಿತು. ನಗುಮೂಡಿತು ಅವನ ತುಟಿಯಂಚಿನಲ್ಲಿ. ಸಂತಸದಿ ನಗುತ್ತಲೇ ಭೀಮನ ಮುಖವನ್ನು ನೋಡಿದ.
ಯೌವನಾಶ್ವನನ್ನು ಗೆದ್ದು ಅವನಲ್ಲಿರುವ ಆ ಶ್ರೇಷ್ಠ ಅಶ್ವವನ್ನು ತರುವ ಹೊಣೆಗಾರಿಕೆ ತನ್ನದೆಂದು ಹೆಮ್ಮೆಯಿಂದ ನುಡಿದ ಪವನಸುತ. ಒಡನೆಯೇ ಎದ್ದುನಿಂತವನು ಕರ್ಣತನಯನಾದ ವೃಷಧ್ವಜ. ಭೀಮನ ಜೊತೆಗೆ ಪರಾಕ್ರಮವನ್ನು ತೋರಲು ತನಗೂ ಒಂದು ಅವಕಾಶ ಕೊಡು ಎಂದು ಧರ್ಮರಾಯನಲ್ಲಿ ಕೇಳಿಕೊಂಡ. ಕರ್ಣನ ಮಗನಾಡಿದ ಸಾಹಸದ ನುಡಿ ಘಟೋತ್ಕಚನ ಮಗನಾದ ಮೇಘನಾದನ ಕಿವಿಗೆ ಬಿತ್ತು. ತಕ್ಷಣವೇ ಬಂದ. ಹೊಳೆಹೊಳೆವ ತನ್ನ ಕಿರೀಟವನ್ನು ಧರ್ಮರಾಯನ ಪಾದದ ಬಳಿಯಿಟ್ಟ. ಕುದುರೆಯನ್ನು ತರುವ ಶಕ್ತಿ ತನ್ನಲ್ಲಿದೆ ಎಂಬ ಶೌರ್ಯದ ಮಾತುಗಳನ್ನಾಡಿದ. ವೃಷಧ್ವಜ ಮೇಘನಾದರನ್ನು ಜೊತೆಗೆ ಸೇರಿಸಿಕೊಂಡು ಭೀಮ ಯೌವನಾಶ್ವನಲ್ಲಿಗೆ ಹೋಗಿ ಕುದುರೆಯನ್ನು ಗೆದ್ದು ತರಬೇಕು ಎನ್ನುವುದು ನಿರ್ಣಯವಾಯಿತು.
ಹೀಗಿದ್ದಾಗಲೇ ಯುದಿಷ್ಠಿರನಿಗೆ ಮೂಡಿದ್ದು ಕೃಷ್ಣ ಯೋಚನೆ. ಕೃಷ್ಣನಿಲ್ಲದೆ ತನ್ನ ಕಾರ್ಯ ಮುಂದುಗಾಣದು ಎಂಬ ಆಲೋಚನೆ ಮೂಡಿದ್ದೇ ತಡ ದ್ವಾರಕೆಯಲ್ಲಿರುವ ಮುರಾರಿಯನ್ನು ಹಸ್ತಿನಾವತಿಗೆ ಗೌರವಪೂರ್ವಕವಾಗಿ ಕರೆಸುವ ನಿರ್ಧಾರ ಮಾಡಿದ. ಅಜಾತಶತ್ರುವನ್ನು ಅಚ್ಚರಿಗೀಡುಮಾಡುವ ಸುದ್ದಿಯೊಂದು ಬಂದುತಲುಪಿದ್ದು ಅದೇ ಗಳಿಗೆಯಲ್ಲಿ. ಆಪ್ತರ ಆಲೋಚನೆಯನ್ನು ಅಂದಾಜಿಸಿದ ಆಪದ್ಬಾಂಧವನಂತೆ ಶ್ರೀಕೃಷ್ಣ ಅದಾಗಲೇ ಹಸ್ತಿನಾವತಿಯೆಡೆಗೆ ಮುಖ ಮಾಡಿದ್ದ!
ಪದುಮನಾಭನ ಪುರಪ್ರವೇಶದ ಸುದ್ದಿ ಕಿವಿಯನ್ನು ಹೊಕ್ಕ ಕೂಡಲೇ ಪದುಮ ಅರಳುವಿಕೆಯ ಸುಳಿವರಿತ ದುಂಬಿಯಾಗಿಹೋದ ಧರ್ಮರಾಯ. ಶ್ರೀಕೃಷ್ಣನನ್ನು ಅತೀವ ಆನಂದದಿಂದ ಸ್ವಾಗತಿಸಿದ. ಯಾಗದ ಸುದ್ದಿಯನ್ನು ತಿಳಿಸಿದ. ಅನುಗ್ರಹಿಸಬೇಕೆಂದು ಕೈಮುಗಿದ.
ಕೃಷ್ಣ ಮೊಗದಲ್ಲಿದ್ದುದು ಹೂವಿನಂದದ ನಗು. ಲಘುವಾಗಿ ಮೇಲೆದ್ದ ಕೃಷ್ಣಕರದಲ್ಲಿ ಆಶೀರ್ವಾದದ ಕುಸುಮ ಅರಳಿನಿಂತಿತ್ತು. ಮುರಾರಿಯ ಚರಣಕಮಲಕ್ಕೆ ತನ್ನ ಶಿರವನ್ನು ಸ್ಪರ್ಶಿಸಿ ಧನ್ಯನಾದ ಧರ್ಮಜ.
***
ಡಾ. ವಿಶ್ವನಾಥ ಎನ್ ನೇರಳಕಟ್ಟೆ
ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…
ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…
ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…
ಸಂದರ್ಶನ: ಸೂರ್ಯಕೀರ್ತಿ 1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ? ಹೌದು, 2016ರಿಂದ…
View Comments
ಘಡೋತ್ಕಚ ಕುರುಕ್ಷೇತ್ರ ಯುದ್ಧದಲ್ಲಿ ಮಾಡಿದವನಲ್ಲವೇ ? ಅಶ್ವಮೇಧ ಯಾಗ ತದನಂತರದ್ದು ತಾನೇ ? ಹಾಗಾಗಿ ಇಲ್ಲಿ ಘಟೋತ್ಕಚ ಹೇಗೆ ಬಂದ ತಿಳಿಯುವುದಿಲ್ಲ.